
ಕಾರವಾರ: ‘12ನೇ ಶತಮಾನದಲ್ಲೇ ಮಹಿಳಾ ಪ್ರಾತಿನಿಧ್ಯದ ಬಗ್ಗೆ ಪ್ರತಿಪಾದಿಸಿ, ಮಹಿಳೆಯರ ಮೇಲೆ ನಡೆಯುತ್ತಿದ್ದ ಶೋಷಣೆಗಳ ವಿರುದ್ಧ ವಚನದ ಮೂಲಕ ಸಂದೇಶ ಸಾರಿದ್ದ ಶಿವಯೋಗಿ ಸಿದ್ದರಾಮೇಶ್ವರರು ನಾಡು ಕಂಡ ಮಹಾನ್ ಸಂತರಾಗಿದ್ದಾರೆ’ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ಹೇಮಲತಾ ಕೆ. ಹೇಳಿದರು.
ಇಲ್ಲಿನ ಬಾಡದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
‘ಸಿದ್ದರಾಮೇಶ್ವರರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಮಹಿಳೆಯರಿಗೆ ಸಮಾನ ಹಕ್ಕು ನೀಡುವಂತೆ ಅವರು ಸಾರಿದ್ದ ಸಂದೇಶ ಪಾಲನೆ ಇಂದಿಗೂ ಆಗಿಲ್ಲ. ಮೇಲುಕೀಳು, ವರ್ಣಧರ್ಮ ಸಂಪ್ರದಾಯಗಳಿಂದ ದೂರ ಉಳಿದು, ಎಲ್ಲರೂ ಸಮಾನರು ಎಂಬ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಚಿಂತನೆಯನ್ನು ಆ ಕಾಲದಲ್ಲೇ ಹುಟ್ಟು ಹಾಕಿದ್ದರು’ ಎಂದರು.
‘ಸಾರ್ವಜನಿಕರಿಗಾಗಿ ಕೆರೆ ಕಟ್ಟೆಗಳು, ಬಾವಿಗಳು, ದೇವಾಲಯಗಳು, ಅನ್ನದಾಸೋಹ ಕಟ್ಟಡಗಳನ್ನು ಕಟ್ಟಿ, ಗೋ ದಾನ, ಭೂದಾನ ಮತ್ತು ಸಾಮೂಹಿಕ ವಿವಾಹಗಳನ್ನು ಮಾಡಿಸಿ, ಜೀವನ ಪರ್ಯಾಂತ ಸಮಾಜದ ಸುಧಾರಣೆಯಲ್ಲಿ ತೋಡಗಿಸಿಕೊಂಡಿದ್ದರು’ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಪ್ರಕಾಶ ಕುಡಾಳಕರ, ಸಮಾಜದ ಅಧ್ಯಕ್ಷ ಭರಮಪ್ಪ ಕಟ್ಟಿಮನೆ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.