ADVERTISEMENT

ಜಾತಿ ಸಿದ್ಧಾಂತಕ್ಕೆ ಕಟ್ಟು ಬೀಳದಿರಿ: ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಆಶಯ

ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಆಶಯ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 7:32 IST
Last Updated 5 ಅಕ್ಟೋಬರ್ 2025, 7:32 IST
ಆರ್ಯಈಡಿಗ, ನಾಮಧಾರಿ, ಬಿಲ್ಲವ ಅಭಿವೃದ್ಧಿ ಸಂಘದ ಶಿರಸಿ ಘಟಕದ ವತಿಯಿಂದ ಹಮ್ಮಿಕೊಂಡ ಪಾದುಕಾ ಪೂಜೆ ಕಾರ್ಯಕ್ರಮದ ಸಂದರ್ಭದಲ್ಲಿ ಶಾಸಕ ಭೀಮಣ್ಣ ನಾಯ್ಕ ಹಾಗೂ ಕುಟುಂಬಸ್ಥರು ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಅವರಿಗೆ ಪೂಜೆ ಸಲ್ಲಿಸಿದರು
ಆರ್ಯಈಡಿಗ, ನಾಮಧಾರಿ, ಬಿಲ್ಲವ ಅಭಿವೃದ್ಧಿ ಸಂಘದ ಶಿರಸಿ ಘಟಕದ ವತಿಯಿಂದ ಹಮ್ಮಿಕೊಂಡ ಪಾದುಕಾ ಪೂಜೆ ಕಾರ್ಯಕ್ರಮದ ಸಂದರ್ಭದಲ್ಲಿ ಶಾಸಕ ಭೀಮಣ್ಣ ನಾಯ್ಕ ಹಾಗೂ ಕುಟುಂಬಸ್ಥರು ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಅವರಿಗೆ ಪೂಜೆ ಸಲ್ಲಿಸಿದರು   

ಶಿರಸಿ: ಪ್ರತಿಯೊಬ್ಬನಿಗೂ ಆತನ ಜಾತಿ ಮುಖ್ಯ. ಆದರೆ ಅದು ಮನೆಯೊಳಗೆ ಇರಬೇಕು. ಸಮಾಜದಲ್ಲಿ ಎಲ್ಲ ಜಾತಿ ಒಂದೇ ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು. ಯಾರು ಕೂಡ ಜಾತಿ ಸಿದ್ಧಾಂತಕ್ಕೆ ಕಟ್ಟು ಬೀಳಬಾರದು ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಹೇಳಿದರು. 

ಜುನಾ ಅಖಾಡದ ಮಹಾಮಂಡಲೇಶ್ವರ ಪದವಿ ಪಡೆದ ಕಾರಣ ನಗರದ ಸುಪ್ರಿಯಾ ಇಂಟರ್‌ನ್ಯಾಶನಲ್ ಹೊಟೇಲ್‍ನಲ್ಲಿ ಆರ್ಯಈಡಿಗ, ನಾಮಧಾರಿ, ಬಿಲ್ಲವ ಅಭಿವೃದ್ಧಿ ಸಂಘದ ಶಿರಸಿ ಘಟಕದ ಪದಾಧಿಕಾರಿಗಳು ಹಮ್ಮಿಕೊಂಡಿದ್ದ  ಸ್ವಾಮೀಜಿ ಅವರ ಪಾದುಕಾ ಪೂಜೆ, ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಾತಿಯನ್ನು ಮನೆಯೊಳಗೆ ಇಟ್ಟುಕೊಳ್ಳಿ, ಸಂಘಟನೆ ಮೂಲಕ ಬೆಳೆಸಿಕೊಳ್ಳಿ. ಆದರೆ ಎಲ್ಲ ಜಾತಿಗಳು ಮಿಳಿತವಾಗಿರುವ ಸಮಾಜದಲ್ಲಿ ಎಲ್ಲರೊಟ್ಟಿಗೆ ಬೆರೆತು ಸಾಗಬೇಕು. ಆಗ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯ’ ಎಂದರು. 

ADVERTISEMENT

‘ಸುಖ, ಶಾಂತಿ, ನೆಮ್ಮದಿಗಾಗಿ ಪ್ರತಿಯೊಬ್ಬರು ಹಂಬಲಿಸುತ್ತಾರೆ. ಆದರೆ ನಿತ್ಯ ಸಂತೋಷವಾಗಿರಲು ನಾನೆಂಬ ಭಾವನೆ ದೂರ ಮಾಡಬೇಕು’ ಎಂದು ತಿಳಿಸಿದರು. 

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ‘ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಭಗವಂತ ಹಾಗೂ ಗುರುಗಳ ಕೃಪೆ ಪಡೆದು ಆರಂಭಿಸಿದ ಕಾರ್ಯ ನಿರ್ವಿಘ್ನವಾಗಿ ನಡೆಯುತ್ತದೆ. ಈ ಕಾರಣ ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಭಾಭವನ ಕಾಮಗಾರಿ ಪೂರ್ವ ಸ್ವಾಮೀಜಿ ಆಶೀರ್ವಾದ ಪಡೆಯಲಾಗಿದೆ. ನಾರಾಯಣಗುರು ನಗರದಲ್ಲಿ ₹5 ಕೋಟಿ ವೆಚ್ಚದಲ್ಲಿ ಸಭಾಭವನ, ಗುರು ಮಂದಿರ ನಿರ್ಮಿಸಲು ಚಿಂತನೆ ನಡೆಸಲಾಗಿದ್ದು, ಸಮಾಜದ ಸಹಕಾರದಿಂದಲೇ ನಿರ್ಮಿಸಲಾಗುವುದು. ಸಭಾಭವನ ನಿರ್ಮಾಣಕ್ಕೆ ಸರ್ಕಾರದ ಸಹಕಾರ ಕೂಡ ಕೇಳಲಾಗಿದೆ’ ಎಂದರು. 

ಈ ವೇಳೆ ಸಮುದಾಯದ ಪರವಾಗಿ ಉದ್ಯಮಿ ಅಶ್ವಿನ್‌ ನಾಯ್ಕ ದಂಪತಿ ಸ್ವಾಮೀಜಿ ಅವರ ಪಾದುಕಾ ಪೂಜೆ ನೆರವೇರಿಸಿದರು. ಶಾಸಕ ಭೀಮಣ್ಣ ನಾಯ್ಕ ದಂಪತಿ ಪೂಜೆ ಸಲ್ಲಿಸಿ ಶ್ರೀಗಳ ಆಶೀರ್ವಾದ ಪಡೆದರು. 

ಪ್ರಮುಖರಾದ ಮಂಜುನಾಥ ನಾಯ್ಕ, ಎಚ್.ಆರ್.ನಾಯ್ಕ, ಟಿ.ಟಿ.ನಾಯ್ಕ, ಶ್ರೀಧರ ನಾಯ್ಕ, ನಾಗೇಶ ನಾಯ್ಕ, ನರಸಿಂಹ ನಾಯ್ಕ, ಆರ್.ಎಸ್.ನಾಯ್ಕ, ಕೆ.ಜಿ.ನಾಯ್ಕ, ವಿ.ಎನ್.ನಾಯ್ಕ ಇತರರಿದ್ದರು.

 ಶ್ರೀರಾಮ ಕ್ಷೇತ್ರದ ಶಿರಸಿ ವಿಭಾಗದ ಜವಾಬ್ದಾರಿ ವಹಿಸಿಕೊಂಡ ವೆಂಕಟೇಶ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಶ್ರೀನಿವಾಸ ನಾಯ್ಕ ಸ್ವಾಗತಿಸಿದರು. ಕುಮಾರ ನಾಯ್ಕ ನಿರೂಪಿಸಿದರು. 

ಸಂಸ್ಕಾರವಿದ್ದರೆ ಸಾತ್ವಿಕತೆ ಬರುತ್ತದೆ. ಹಾಗಾಗಿ ಸಮುದಾಯದ ಯುವ ಪೀಳಿಗೆಗೆ ಸಂಸ್ಕಾರ ನೀಡುವ ಜವಾಬ್ದಾರಿ ಹಿರಿಯರ ಮೇಲಿದೆ.
ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಕನ್ಯಾಡಿ ಶ್ರೀರಾಮ ಕ್ಷೇತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.