ADVERTISEMENT

ಶಿರಸಿ | ಪರೀಕ್ಷೆ ವಿಳಂಬದ ಕಾರಣಕ್ಕೆ ಕೃಷಿಗೆ ಹೊರಳಿದ ಮಕ್ಕಳು

15ನೇ ಸ್ಥಾನಕ್ಕೆ ಕುಸಿದ ಶೈಕ್ಷಣಿಕ ಜಿಲ್ಲೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 20:00 IST
Last Updated 10 ಆಗಸ್ಟ್ 2020, 20:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶಿರಸಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಕಳೆದ ವರ್ಷ 12 ಸ್ಥಾನದಲ್ಲಿದ್ದ ಶಿರಸಿ ಶೈಕ್ಷಣಿಕ ಜಿಲ್ಲೆಯು 15ನೇ ಸ್ಥಾನಕ್ಕೆ ಕುಸಿಯುವ ಮೂಲಕ ‘ಬಿ’ ಗ್ರೇಡ್ ಪಡೆದಿದೆ.

ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೊಯಿಡಾ ತಾಲ್ಲೂಕುಗಳನ್ನು ಒಳಗೊಂಡಿರುವ ಶಿರಸಿ ಶೈಕ್ಷಣಿಕ ಜಿಲ್ಲೆಗೆ ಶಿರಸಿ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಸನ್ನಿಧಿ ಹೆಗಡೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಸಿದ್ದಾಪುರ ಪ್ರಶಾಂತಿ ಪ್ರೌಢಶಾಲೆಯ ವಿದ್ಯಾರ್ಥಿ ಅನಿರುದ್ಧ ಗುತ್ತೀಕರ (624 ಅಂಕ) ಪಡೆದು ದ್ವಿತೀಯ, ಹೆಗಡೆ ಗಜಾನನ ಪ್ರೌಢಶಾಲೆಯ ಅಖಿಲಾ ಭಾಸ್ಕರ ಹೆಗಡೆ (622 ಅಂಕ) ತೃತೀಯ ಸ್ಥಾನ ಪಡೆದಿದ್ದಾರೆ.

ಪ್ರತ್ಯೇಕ ಶೈಕ್ಷಣಿಕ ಜಿಲ್ಲೆ ರಚನೆಯಾದಾಗಿನಿಂದ ಉತ್ತಮ ಸಾಧನೆ ಮಾಡುತ್ತಿರುವ ಶಿರಸಿ ಶೈಕ್ಷಣಿಕ ಜಿಲ್ಲೆಯು, 2018ರಲ್ಲಿ ಮೊದಲ ಬಾರಿಗೆ 21ನೇ ಸ್ಥಾನಕ್ಕೆ ಕುಸಿದಿತ್ತು.

ADVERTISEMENT

‘ಶಿರಸಿ ಶೈಕ್ಷಣಿಕ ಜಿಲ್ಲೆಯು 2019ರಲ್ಲಿ 12ನೇ ಸ್ಥಾನ ಪಡೆದಿತ್ತು. ಈ ಬಾರಿ ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆಯಬೇಕೆಂಬ ಗುರಿ ನಮ್ಮದಾಗಿತ್ತು. ಅದೇ ರೀತಿ ಸಿದ್ಧತೆಯನ್ನು ನಡೆಸಿದ್ದೆವು. ಕೋವಿಡ್ 19 ಕಾರಣದಿಂದ ಪರೀಕ್ಷೆ ವಿಳಂಬವಾಯಿತು. ಈ ಭಾಗದಲ್ಲಿ ಸಕಾಲಕ್ಕೆ ಮಳೆಯಾದ ಕಾರಣ ಕೃಷಿ ಕಾರ್ಯ ಆರಂಭವಾಯಿತು. ವಿಶೇಷವಾಗಿ ಯಲ್ಲಾಪುರ, ಮುಂಡಗೋಡ, ಹಳಿಯಾಳ ತಾಲ್ಲೂಕುಗಳಲ್ಲಿ ವಿದ್ಯಾರ್ಥಿಗಳು ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಇದು ಫಲಿತಾಂಶ ಕುಸಿತಕ್ಕೆ ಪ್ರಮುಖ ಕಾರಣವಾಯಿತು’ ಎಂದು ಡಿಡಿಪಿಐ ದಿವಾಕರ ಶೆಟ್ಟಿ ಪ್ರತಿಕ್ರಿಯಿಸಿದರು.

‘ಪರೀಕ್ಷೆಗೆ ಇಡೀ ಶೈಕ್ಷಣಿಕ ಜಿಲ್ಲೆಯಲ್ಲಿ ಕೇವಲ 11 ಮಕ್ಕಳು ಮಾತ್ರ ಗೈರು ಹಾಜರಾಗಿದ್ದರು. ಅವರಲ್ಲಿ ಎಂಟು ಮಕ್ಕಳಿಗೆ ಅನಾರೋಗ್ಯದ ಕಾರಣ ಪರೀಕ್ಷೆ ಬರೆಯಲು ಆಗಿರಲಿಲ್ಲ. ಶಿಕ್ಷಕರು ಸಕ್ರಿಯವಾಗಿ ಇದ್ದ ಕಾರಣ ಎಲ್ಲ ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಫಲಿತಾಂಶ ಕಡಿಮೆ ಆಗಬಹುದೆಂಬ ನಿರೀಕ್ಷೆಯಿತ್ತು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.