ಶಿರಸಿ: ವೇದಗಳಲ್ಲಿ ಬರುವ ಸಂವಾದ ಸೂತ್ರಗಳಿಂದ ರಂಗಭೂಮಿ ರಚನೆಯಾಯಿತು ಎಂದು ಸಾಹಿತಿ ಪ್ರೊ.ಎಚ್.ಆರ್. ಅಮರನಾಥ್ ಹೇಳಿದರು.
ಇಲ್ಲಿನ ಎಂಎಂ ಕಲಾ ಮತ್ತು ವಿಜ್ಞಾನ ಕಾಲೇಜಿನ ಕನ್ನಡ ವಿಭಾಗ ಹಾಗೂ ಸಕ್ಕರೆ ಬಾಳಾಚಾರ್ಯ ಶಾಂತಕವಿ ಟ್ರಸ್ಟ್ ಧಾರವಾಡ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಆಧುನಿಕ ಕನ್ನಡ ರಂಗಭೂಮಿ ದಿನದ ಅಂಗವಾಗಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭರತನ ನಾಟ್ಯ ಶಾಸ್ತ್ರದಲ್ಲಿ ಇಂದ್ರವಿಜಯ ತ್ರಿಪುರದಾಹ ದಕ್ಷ ಯಜ್ಞದಿಂದ ಭೂಲೋಕಕ್ಕೆ ನಾಟಕಗಳು ಬಂದವು ಎಂಬ ಪ್ರತೀತಿ ಇದೆ. ಹಿಂದಿನ ಕಾಲದಲ್ಲಿ ನಾಟಕಗಳು ಬಯಲು ಪ್ರದೇಶಗಳಲ್ಲಿ ನಡೆಯುತ್ತಿತ್ತು, ನಂತರ ಕ್ರಮೇಣ ರಂಗಭೂಮಿಗಳಲ್ಲಿ ನಡೆಯುತ್ತಾ ಬಂದವು. ಯಕ್ಷಗಾನ, ಚಲನಚಿತ್ರ, ದೂರದರ್ಶನ ಧಾರವಾಹಿಗಳಲ್ಲಿ ನಾಟಕಗಳು ಇದ್ದೇ ಇರುತ್ತದೆ. ನಾಟಕದ ದೃಶ್ಯಗಳನ್ನು ನಾವು ಪ್ರತ್ಯಕ್ಷವಾಗಿ ನೋಡುತ್ತೇವೆ. ಆದರೆ ಧಾರಾವಾಹಿ ಸಿನಿಮಾಗಳನ್ನು ಕ್ಯಾಮೆರಾ ಮೂಲಕ ದೂರದರ್ಶನದಲ್ಲಿ ನೋಡುತ್ತೇವೆ. ಕಾಳಿದಾಸ ಶೂದ್ರಕ, ಮೆಗಸ್ತನಿಸ್ ಹೀಗೆ ಹಲವಾರು ಕವಿಗಳು ನಾಟಕಗಳನ್ನು ರಚಿಸಿದ್ದಾರೆ’ ಎಂದು ತಿಳಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥ ರಾಜು ಹೆಗಡೆ ಮಾತನಾಡಿ, ‘ಸಕ್ಕರೆ ಬಾಳಾಚಾರ್ಯರು ದೊಡ್ಡ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಕನ್ನಡಕ್ಕೆ ಹಲವು ಸಾಧನೆಯನ್ನು ಮಾಡಿದ್ದಾರೆ. ಇವರು ದ.ರಾ. ಬೇಂದ್ರೆಯವರಿಗೆ ಗುರು ಸ್ವರೂಪದಲ್ಲಿದ್ದರು. ನಿರ್ದೇಶನವನ್ನು ನೀಡಿ ಹಲವು ನಾಟಕಗಳನ್ನು ರಚಿಸಿದ್ದಾರೆ. ಕನ್ನಡ ಭಾಷೆ ಹಾಗೂ ರಂಗಭೂಮಿ ಉಳಿವಿಗೆ ಇವರು ನೀಡಿದ ಕೊಡುಗೆ ಅಪಾರ’ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಟಿ.ಎಸ್.ಹಳೆಮನೆ ಸ್ವಾಗತಿಸಿದರು. ಸಂಗೀತ ವಿಭಾಗದ ಮುಖ್ಯಸ್ಥ ಕೆ.ಜಿ.ಭಟ್ ವಂದಿಸಿದರು. ಸ್ನೆಹಾ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.