
ಶಿರಸಿ: ‘ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತ ನೀಡಿದ ಸಾವಿರ ದಿನಗಳು ಕೇವಲ ವಿವಾದ, ಸುಳ್ಳು, ಅಪರಾಧ ಮತ್ತು ಅನಾಚಾರಗಳ ಕಾಲಘಟ್ಟವಾಗಿದ್ದು, ಸರ್ಕಾರವು ಯಾವ ಪುರುಷಾರ್ಥಕ್ಕಾಗಿ ಸಮಾವೇಶ ಆಯೋಜಿಸುತ್ತಿದೆ? ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನಿಸಿದರು.
ನಗರದಲ್ಲಿ ಶನಿವಾರ ಅವರು ಕಾಂಗ್ರೆಸ್ ಸರ್ಕಾರದ ಸಾವಿರ ದಿನ ಸಾವಿರ ಸಮಸ್ಯೆ ಎಂಬ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
‘ಅಧಿಕಾರವನ್ನು ಕೇವಲ ಸ್ವಾರ್ಥ ಮತ್ತು ಭ್ರಷ್ಟತೆಗೆ ಬಳಸಿಕೊಂಡ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅಪರಾಧ ಚಟುವಟಿಕೆಗಳು ವಿಕೇಂದ್ರೀಕರಣಗೊಂಡಿವೆ. ಅಧಿಕಾರಿ ವರ್ಗದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ರೈತರ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲವೂ ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಗೃಹಲಕ್ಷ್ಮಿಯರಿಗೆ ನೀಡಬೇಕಿದ್ದ ಸುಮಾರು ₹5 ಸಾವಿರ ಕೋಟಿ ಏನಾಯಿತು ಎಂಬ ಮಾಹಿತಿಯೇ ಇಲ್ಲದಂತಾಗಿದೆ. ಹೊಸ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಲು ಸರ್ಕಾರದ ಬಳಿ ಹಣವಿಲ್ಲದೆ ರಾಜ್ಯವು ಆರ್ಥಿಕವಾಗಿ ದಿವಾಳಿಯಾಗಿದೆ’ ಎಂದು ಅವರು ವಾಗ್ದಾಳಿ ನಡೆಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಷ್ಟು ಬಜೆಟ್ ಮಂಡಿಸಿದ್ದಾರೆ ಎಂಬುದು ಮುಖ್ಯವಲ್ಲ, ಬದಲಾಗಿ ಆ ಬಜೆಟ್ನಿಂದ ಜನಸಾಮಾನ್ಯರಿಗೆ ಸಿಕ್ಕ ಪ್ರಯೋಜನವೇನು ಎಂಬುದನ್ನು ಮೊದಲು ಬಹಿರಂಗಪಡಿಸಲಿ’ ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್.ಹೆಗಡೆ ಮಾತನಾಡಿ,‘ಸಾವಿರ ದಿನಗಳ ಸಮಾವೇಶ ಎಂಬುದು ಪ್ರಶ್ನಾರ್ಹವಾಗಿದ್ದು, ಪ್ರಸ್ತುತ ಸರ್ಕಾರದ ಆಡಳಿತವೇ ಸಮಸ್ಯೆಗಳ ಆಗರವಾಗಿದೆ’ ಎಂದರು.
ಮಾಜಿ ಶಾಸಕ ಸುನೀಲ ಹೆಗಡೆ, ಬಿಜೆಪಿ ಜಿಲ್ಲಾ ಘಟಕದ ವಕ್ತಾರ ಸದಾನಂದ ಭಟ್, ಪ್ರಮುಖರಾದ ಆನಂದ ಸಾಲೇರ, ರಮೇಶ ಕುಪ್ಪಳ್ಳಿ, ಉಷಾ ಹೆಗಡೆ, ಶ್ರೀಕಾಂತ ಬಳ್ಳಾರಿ, ಪ್ರೇಮಕುಮಾರ ನಾಯ್ಕ ಇದ್ದರು.
Quote - ಅನ್ನಭಾಗ್ಯ ಯೋಜನೆಗೆ ಹಣ ಸಾಲದೆ ಇದೀಗ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸುವ ಮೂಲಕ ಹಣ ಉಳಿಸಲು ಸರ್ಕಾರ ಸಂಚು ರೂಪಿಸುತ್ತಿದೆ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.