
ಶಿರಸಿ: ‘ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಂದಿನಿ ಪಾರ್ಲರ್ ತೆರೆಯಲು ಧಾರವಾಡ ಹಾಲು ಒಕ್ಕೂಟದಿಂದ ಪ್ರಯತ್ನ ಮಾಡಲಾಗುವುದು’ ಎಂದು ಒಕ್ಕೂಟದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಹೇಳಿದರು.
ತಾಲ್ಲೂಕಿನ ಬಿಸಲಕೊಪ್ಪದಲ್ಲಿ ಹೊಸದಾಗಿ ಆರಂಭಗೊಂಡ ನಂದಿನಿ ಪಾರ್ಲರ್ ಉದ್ಘಾಟಿಸಿ ಅವರು ಮಾತನಾಡಿದರು. ‘ಎಲ್ಲರೂ ಒಂದೇ ವ್ಯಾಪಾರ ಅಥವಾ ವ್ಯವಹಾರ ನಡೆಸುವುದರಿಂದ ಲಾಭ ಗಳಿಸಲು ಸಾಧ್ಯವಿಲ್ಲ. ಹಾಲಿನ ವಿಷಯದಲ್ಲಿ ಎಲ್ಲರಿಗೂ ಪ್ರತಿಸ್ಪರ್ಧಿಯಾಗಿ ಇಂದು ಧಾರವಾಡ ಹಾಲು ಒಕ್ಕೂಟ ಬೆಳೆದಿದೆ. ಎಲ್ಲ ಗ್ರಾಮದ ರೈತರ ಹಾಗೂ ಜಿಲ್ಲೆಯ ಜನರಿಂದ ಇದು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೊಂದು ನಂದಿನಿ ಪಾರ್ಲರ್ ಆಗಬೇಕು. ಆ ನಿಟ್ಟಿನಲ್ಲಿ ನಾವು ಮತ್ತು ನಮ್ಮ ಸಿಬ್ಬಂದಿ ಸದಾ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.
‘ಡೈರಿಯಿಂದ ಹಾಲನ್ನು ತೆಗೆದುಕೊಂಡು ಹೋಗುವವರ ಸಂಖ್ಯೆ ಕಡಿಮೆಯಾಗಿ, ನಂದಿನಿ ಪಾರ್ಲರ್ ಇಂದ ಗುಣಮಟ್ಟದ ಹಾಲನ್ನು ಗ್ರಾಹಕರು ತೆಗೆದುಕೊಂಡರೆ ನಮಗೆ ಲಾಭವಾಗುತ್ತದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಸಿಗುವ ಹಾಲಿನ ಗುಣಮಟ್ಟ ಬೇರೆ ಯಾವುದೇ ಜಿಲ್ಲೆಯ ಹಾಲಿನಲ್ಲೂ ಸಿಗಲು ಸಾಧ್ಯವಿಲ್ಲ. ನಬಾರ್ಡ್ ಸಂಸ್ಥೆಯವರು ಬಂದು ಜಿಲ್ಲೆಯ ಹಾಲಿನ ಗುಣಮಟ್ಟ ಪರೀಕ್ಷಿಸಿ ಉತ್ತಮ ಗುಣಮಟ್ಟದ ಹಾಲು ಎಂದು ಶಿಫಾರಸು ಮಾಡಿದ್ದಾರೆ’ ಎಂದರು.
ನಂದಿನಿ ಪಾರ್ಲರ್ ಮುಖ್ಯಸ್ಥೆ ಪ್ರವೀಣಾ ಹೆಗಡೆ, ಒಕ್ಕೂಟದ ಜಿಲ್ಲಾ ಮಾರುಕಟ್ಟೆ ಸಹಾಯಕ ವ್ಯವಸ್ಥಾಪಕ ಶರಣು ಮೆಣಸಿನಕಾಯಿ, ಮಾರುಕಟ್ಟೆ ಅಧಿಕಾರಿ ಬಸವರಾಜ, ಸ್ಥಳೀಯ ಪ್ರಮುಖರಾದ ಎಸ್.ಎನ್.ಭಟ್, ಸತೀಶ ನಾಯ್ಕ, ರಾಜೇಶ್ ನಾಯ್ಕ ಕಂಡ್ರಾಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.