ಶಿರಸಿ: ಇಲ್ಲಿನ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ದಾಖಲಾದ ರೋಗಿಗಳಿಗೆ ಆಕ್ಸಿಜನ್ಪೂರೈಸುವ ಘಟಕದಲ್ಲಿ ಶನಿವಾರ ನಸುಕಿನ ಜಾವ ಸೋರಿಕೆ ಕಂಡುಬಂದಿದೆ.
ಆಸ್ಪತ್ರೆ ಪಕ್ಕದಲ್ಲಿ ಆಕ್ಸಿಜನ್ಸಂಗ್ರಹಾಗಾರವಿದ್ದು ಇಲ್ಲಿಂದ ಪೈಪ್ ಲೈನ್ ಮೂಲಕ ವಾರ್ಡ್ ಗೆ ಆಕ್ಸಿಜನ್ ಪೂರೈಕೆ ಆಗುತ್ತಿದೆ. ನಸುಕಿನ ಜಾವದಿಂದ ನಿರೀಕ್ಷಿತ ಪ್ರಮಾಣದಲ್ಲಿ ರೋಗಿಗಳಿಗೆ ಆಕ್ಸಿಜನ್ ಪೂರೈಕೆ ಆಗದಿದ್ದಾಗ ಗಮನಕ್ಕೆ ಬಂದಿದೆ.
'ಕೋವಿಡ್ ವಾರ್ಡ್ನಲ್ಲಿ 20 ರೋಗಿಗಳಿದ್ದಾರೆ. ಅವರಲ್ಲಿ 6 ಮಂದಿಯಷ್ಟೇ ಗಂಭೀರ ಸ್ಥಿತಿಯಲ್ಲಿದ್ದು ಅವರಿಗೆ ಹೆಚ್ಚಿನ ಪ್ರಮಾಣದ ಆಕ್ಸಿಜನ್ ಅಗತ್ಯವಿದೆ. ಆಕ್ಸಿಜನ್ ಪೂರೈಕೆಗೆ ಸದ್ಯಕ್ಕೆ ಸಮಸ್ಯೆ ಇಲ್ಲ. ಆದರೆ, ಸೋರಿಕೆ ತಡೆಗಟ್ಟುವುದು ವಿಳಂಬವಾದರೆ ರೋಗಿಗಳನ್ನು ಸಿದ್ದಾಪುರ, ಯಲ್ಲಾಪುರ ಆಸ್ಪತ್ರೆಗೆ ಸ್ಥಳಾಂತರಿಸಬೇಕಾಗಬಹುದು' ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಸ್ಥಳಕ್ಕೆ ತಂತ್ರಜ್ಞರನ್ನು ಕರೆಯಿಸಲಾಗಿದ್ದು ದುರಸ್ಥಿ ಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್, ಡಿವೈಎಸ್ಪಿ ರವಿ ನಾಯ್ಕ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ,ಎಸ್ಐ ರಾಜಕುಮಾರ್ ಭೇಟಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.