ಶಿರಸಿ: ಸಾಂಕ್ರಾಮಿಕ ಕಾಯಿಲೆಗಳ ಹರಡುವಿಕೆ ಬಗ್ಗೆ ಎಚ್ಚರ ವಹಿಸುವಂತೆ ಒಂದೆಡೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಆಗಾಗ ಜಾಗೃತಿ ಮೂಡಿಸುತ್ತಿದ್ದರೆ, ಮತ್ತೊಂದೆಡೆ ನಗರದಲ್ಲಿ ಹಂದಿಗಳ ಹಾವಳಿಯೂ ಹೆಚ್ಚಾಗತೊಡಗಿದೆ.
ನಗರದ ಬಹುತೇಕ ಬಡಾವಣೆಗಳಲ್ಲಿ ತ್ಯಾಜ್ಯ ತುಂಬಿ ತುಳುಕುತ್ತಿದ್ದು ಅಶುಚಿತ್ವ ತಾಂಡವವಾಡುತ್ತಿದೆ. ಇಲ್ಲಿನ ಕೆಇಬಿ ರಸ್ತೆ, ಗುರುನಗರ, ಮರಾಠಿಕೊಪ್ಪ, ರಾಘವೇಂದ್ರ ಸರ್ಕಲ್, ಜೂ ಸರ್ಕಲ್ ಸೇರಿದಂತೆ ಪೊಲೀಸ್ ಠಾಣೆ ರಸ್ತೆಗಳಲ್ಲಿ ಹಂದಿಗಳ ಹಾವಳಿ ಮಿತಿ ಮೀರಿದ್ದು, ಪಾದಾಚಾರಿಗಳು ಮತ್ತು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಪ್ರತಿ ನಿತ್ಯ ಮುಂಜಾನೆಯಿಂದಲೇ ರಸ್ತೆಗಿಳಿಯುವ ಹಂದಿಗಳು ಸಾರ್ವಜನಿಕರ ನೆಮ್ಮದಿಗೆ ಭಂಗ ತರುತ್ತಿದೆ. ಅಲ್ಲಲ್ಲಿ ಬಿದ್ದಿರುವ ತ್ಯಾಜ್ಯವನ್ನು ಚೆಲ್ಲಾಪಿಲ್ಲಿ ಮಾಡುವುದರ ಜತೆಗೆ ಗಲೀಜು ಹೆಚ್ಚಾಗಲು ಕಾರಣವಾಗಿವೆ ಎಂದು ಸಾರ್ವಜನಿಕರು ದೂರುತ್ತಾರೆ.
ನಗರದಲ್ಲಿ ನಾಯಿಗಳ ಕಾಟವಿದ್ದು, ಅದರ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ದೂರಿದ್ದೆವು. ಆದರೆ ಈಗ ಅವುಗಳ ಜತೆ ಹಂದಿಗಳ ಕಾಟವೂ ಹೆಚ್ಚಾಗಿದೆ. ನಗರದ ಮುಖ್ಯರಸ್ತೆ, ಅಡ್ಡರಸ್ತೆಗಳಲ್ಲಿ ಅಲ್ಲದೇ ಸಣ್ಣಪುಟ್ಟ ಬೀದಿಗಳಲ್ಲೂ ಹಂದಿ ಹಾವಳಿ ಹೆಚ್ಚಾಗಿದ್ದು, ಓಡಾಡಲು ಭಯವಾಗುತ್ತದೆ. ಅವು ಗಲೀಜು ಮಾಡುವುದರ ಜತೆಗೆ ಮಕ್ಕಳಲ್ಲೂ ಭಯ ಹುಟ್ಟಿಸುತ್ತವೆ ಎಂದು ನಗರದ ನಿವಾಸಿ ವಾದಿರಾಜ ‘ಪ್ರಜಾವಾಣಿ’ಗೆ ತಿಳಿಸಿದರು.
ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು, ಜ್ವರ, ಶೀತದಂತಹ ಸಮಸ್ಯೆ ತಲೆದೋರುತ್ತಿದೆ. ಇದರ ಹಿನ್ನೆಲೆಯಲ್ಲಿ ನಗರಪ್ರದೇಶ ಶುಚಿಯಾಗಿಡುವುದರ ಜತೆಗೆ ಹಂದಿಗಳ ಹಾವಳಿ ತಡೆಗಟ್ಟಲು ನಗರಸಭೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಗ್ಯ ನಿರೀಕ್ಷಕರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ನಾಗರಿಕರು ಮನವಿ ಮಾಡಿದ್ದಾರೆ. ಇನ್ನಾದರೂ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಹಂದಿಯ ಮಾಲೀಕರಿಗೆ ನೋಟಿಸ್ ನೀಡಿ ಕ್ರಮಕೈಗೊಳ್ಳಲಿ' ಎಂದು ಅವರು ಆಗ್ರಹಿಸಿದರು.
ಪ್ರತಿನಿತ್ಯ ಹಂದಿಗಳು ರಸ್ತೆಯಲ್ಲಿ ಮಲಗಿರುತ್ತವೆ. ಇದರೊಂದಿಗೆ ಸಾಂಕ್ರಾಮಿಕ ಕಾಯಿಲೆಯ ಭೀತಿ ನಮ್ಮಲ್ಲಿ ಆವರಿಸುತ್ತಿದೆ-ಶ್ರೀನಿವಾಸ ನಾಯ್ಕ- ನಗರ ನಿವಾಸಿ
ಹಂದಿಗಳ ಹಾವಳಿ ಬಗ್ಗೆ ಈ ಹಿಂದೆ ದೂರು ಬಂದಿದ್ದು ಕ್ರಮವಹಿಸಲಾಗಿತ್ತು. ಈಗ ಮತ್ತೆ ಹಂದಿ ಮಾಲೀಕರಿಗೆ ಎಚ್ಚರಿಕೆ ನೀಡಲಾಗುವುದು.. -ಕಾಂತರಾಜ್- ಪೌರಾಯುಕ್ತ ಶಿರಸಿ ನಗರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.