ಶಿರಸಿ: ‘ನಗರದ ಸೌಲಭ್ಯ ವಂಚಿತ ಪ್ರದೇಶದಲ್ಲಿ ಅಗತ್ಯವಿರುವ ಮೂಲಸೌಲಭ್ಯ ಕಲ್ಪಿಸಲು ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ’ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ನಗರಸಭೆಯ ನಗರೋತ್ಥಾನ ಹಾಗೂ ಎಸ್ಎಫ್ಸಿ ವಿಶೇಷ ಅನುದಾನದ ₹1.62 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ನಗರ ಪ್ರದೇಶ ಸೇರಿದಂತೆ ಕ್ಷೇತ್ರದ ಅಭಿವೃದ್ಧಿ ಕಾರ್ಯ ನಿರಂತರ. ನಗರ ವ್ಯಾಪ್ತಿಯಲ್ಲಿ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಸಾಕಷ್ಟು ಅನುದಾನಗಳನ್ನು ಬಿಡುಗಡೆ ಮಾಡುತ್ತಿದೆ. ಜತೆಗೆ ಕುಡಿಯುವ ನೀರಿನ ಯೋಜನೆಗೂ ಈಗಾಗಲೇ ಅನುದಾನ ನೀಡಲಾಗಿದೆ. ಮುಖ್ಯಮಂತ್ರಿ ಅವರು ನೀಡಿದ ವಿಶೇಷ ಅನುದಾನದ ₹50 ಕೋಟಿಯಲ್ಲಿ ₹7 ಕೋಟಿ ವಿವಿಧ ಕಾಮಗಾರಿಗಳಿಗೆ ನೀಡಲಾಗಿದೆ’ ಎಂದರು.
‘ಹಲವು ದಶಕಗಳಿಂದ ಸೌಲಭ್ಯ ವಂಚಿತವಾಗಿದ್ದ ಗಣೇಶನಗರಕ್ಕೆ ಈ ರಸ್ತೆ ಅಭಿವೃದ್ಧಿ ಅನುಕೂಲವಾಗಲಿದೆ. ದಿನನಿತ್ಯದ ಚಟುವಟಿಕೆಗಳಿಗೂ ಪೂರಕವಾಗಿದೆ. ಇನ್ನಷ್ಟು ಅಭಿವೃದ್ಧಿಗೆ ಹಂತಹಂತವಾಗಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.
ಇದೇ ವೇಳೆ ವಾರ್ಡ್ ನಂ. 2ರ ಗಣೇಶನಗರ ವಡ್ಡರ ಓಣಿಯಲ್ಲಿ ₹14.53 ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆ ಲೋಕಾರ್ಪಣೆ ಮಾಡಿದರು.
ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಸದಸ್ಯ ಪ್ರದೀಪ ಶೆಟ್ಟಿ, ತಾರಾ ನಾಯ್ಕ, ವನಿತಾ ಶೆಟ್ಟಿ, ಗೀತಾ ಶೆಟ್ಟಿ, ವನೀತಾ ವಡ್ಡರ, ಪೌರಾಯುಕ್ತ ಪ್ರಕಾಶ ಚನ್ನಪ್ಪನವರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.