ADVERTISEMENT

ಇಂಟರ್ನೆಟ್ ವ್ಯವಸ್ಥೆ ವರ್ಧನೆಗೆ ವಿಶೇಷ ತಂಡ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್

ಜನಾಶೀರ್ವಾದ ಯಾತ್ರೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 14:54 IST
Last Updated 16 ಆಗಸ್ಟ್ 2021, 14:54 IST
ಶಿರಸಿಯ ಪೂಗಭವನದಲ್ಲಿ ಸೋಮವಾರ ಉತ್ತರ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳ ಗಣ್ಯರ ಜತೆ ಸಮಾಲೋಚನೆ ನಡೆಸಿ ಕೇಂದ್ರ ಸಚಿವ ರಾಜೀವ ಚಂದ್ರಶೇಖರ ಮಾತನಾಡಿದರು. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಪುತ್ತೂರು ಶಾಸಕ ಸಂಜೀವ ಬೆಳಂದೂರುಮಠದ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಇದ್ದರು.
ಶಿರಸಿಯ ಪೂಗಭವನದಲ್ಲಿ ಸೋಮವಾರ ಉತ್ತರ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳ ಗಣ್ಯರ ಜತೆ ಸಮಾಲೋಚನೆ ನಡೆಸಿ ಕೇಂದ್ರ ಸಚಿವ ರಾಜೀವ ಚಂದ್ರಶೇಖರ ಮಾತನಾಡಿದರು. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಪುತ್ತೂರು ಶಾಸಕ ಸಂಜೀವ ಬೆಳಂದೂರುಮಠದ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಇದ್ದರು.   

ಶಿರಸಿ: ಗುಡ್ಡಗಾಡು ಜಿಲ್ಲೆ ಉತ್ತರ ಕನ್ನಡದಲ್ಲಿ ಇಂಟರನೆಟ್ ಸಂಪರ್ಕದ ಕೊರತೆ ನೀಗಿಸಿ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಅಧ್ಯಯನ ಕೈಗೊಳ್ಳಲು ತಂತ್ರಜ್ಞರನ್ನೊಳಗೊಂಡ ತಂಡವನ್ನು ಶೀಘ್ರವೇ ಕಳುಹಿಸುವುದಾಗಿ ಕೇಂದ್ರ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಕೌಶಲಾಭಿವೃದ್ದಿ ಹಾಗೂ ಉದ್ದಮಶೀಲತೆ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಭರವಸೆ ನೀಡಿದರು.

ಜನಾಶೀರ್ವಾದ ಯಾತ್ರೆ ಭಾಗವಾಗಿ ನಗರದ ಪೂಗಭವನದಲ್ಲಿ ಸೋಮವಾರ ಉತ್ತರ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳ ಗಣ್ಯರ ಜತೆ ಸಮಾಲೋಚನೆ ನಡೆಸಿ ಅವರು ಮಾತನಾಡಿದರು.

‘ಉತ್ತರ ಕನ್ನಡದ ಲಕ್ಷಾಂತರ ಉದ್ಯೋಗಿಗಳು ಮಹಾನಗರಗಳಲ್ಲಿದ್ದಾರೆ. ಅವರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಜತೆಗೆ ಪರಿಣಾಮಕಾರಿ ಸಂಪರ್ಕ ಸಾಧಿಸಲು ಅಗತ್ಯ ಕ್ರಮವಹಿಸುತ್ತೇನೆ’ ಎಂದರು.

ADVERTISEMENT

‘ಯುವಕರ ಪ್ರತಿಭೆಗೆ ತಕ್ಕಂತೆ ಕೌಶಲ್ಯ ತರಬೇತಿ ಒದಗಿಸುವ ಕುರಿತು ಜಿಲ್ಲೆಯಲ್ಲಿ ಕೌಶಲಾಭಿವೃದ್ಧಿ ಕೇಂದ್ರ ಸ್ಥಾಪಿಸುವ ಬಗ್ಗೆ ಚಿಂತಿಸಲಾಗುವುದು’ ಎಂದರು.

‘ಕೋವಿಡ್ ನಂತರದ ಸ್ಥಿತಿಯಲ್ಲಿ ಅಭಿವೃದ್ಧಿಯ ವೇಗ ಹೆಚ್ಚಿಸುವದು ಗುರಿಯಾಗಿದೆ. ಜನಾಶೀರ್ವಾದ ಯಾತ್ರೆ ಮೂಲಕ ಜನರ ಬಳಿಗೆ ತಲುಪುತ್ತಿದ್ದೇವೆ’ ಎಂದರು.

ಬೇಡಿಕೆ ಮುಂದಿಟ್ಟ ಪ್ರಮುಖರು:ಜಿಲ್ಲೆಗೆ ಅಗತ್ಯ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ವಿವಿಧ ಕ್ಷೇತ್ರಗಳ ಪ್ರಮುಖರು ಕೇಂದ್ರ ಸಚಿವರ ಎದುರು ಬೇಡಿಕೆ ಪಟ್ಟಿ ಮುಂದಿಟ್ಟರು.

‘ಪ್ರತಿಭಾ ಪಲಾಯನ ತಡೆಗಟ್ಟಲು ಕೌಶಲ್ಯಕ್ಕೆ ತಕ್ಕ ಕೆಲಸ ಸಿಗಲು ಉದ್ಯೋಗಾವಕಾಶ ಸೃಷ್ಟಿಸಬೇಕು. ಜಿಲ್ಲೆಯಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪಿಸಬೇಕು’ ಎಂದು ಉತ್ತರ ಕನ್ನಡ ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಜಿ.ಜಿ.ಹೆಗಡೆ ಕಡೆಕೋಡಿ ಹೇಳಿದರು.

ಸಿಎ ಎಸ್.ಜಿ.ಹೆಗಡೆ, ‘ಶಿರಸಿ ಮತ್ತು ಕುಮಟಾದಲ್ಲಿ ಟೆಕ್ನಾಲಜಿ ಪಾರ್ಕ್ ಸ್ಥಾಪಿಸಬೇಕು’ ಎಂದರು‌. ಟಿಎಸ್ಎಸ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ, ‘ಸಹಕಾರ ಸಂಸ್ಥೆಗಳು ಎದುರಿಸುತ್ತಿರುವ ತೆರಿಗೆ ಸಮಸ್ಯೆ ಬಗೆಹರಿಸಬೇಕು. ಸಂಸ್ಕರಿತ ಅಡಿಕೆಪುಡಿಗೆ ವಿಧಿಸುವ ಜಿಎಸ್‍ಟಿ ದರ ಇಳಿಕೆಯಾಗಲಿ’ ಎಂದರು. ಡಾ.ಜಿ.ಜಿ.ಹೆಗಡೆ, ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ ಕ್ರಮವಾಗಲಿ ಎಂದರು.

ಪುತ್ತೂರು ಶಾಸಕ ಸಂಜೀವ ಮಠಂದೂರು, ಕೇಶವ ಪ್ರಸಾದ್ ಇದ್ದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.