ADVERTISEMENT

ಮಾಂಗಲ್ಯ ಸರ ಹಿಂದಿರುಗಿಸಿ ಪ್ರಾಮಾಣಿಕ ಮೆರೆದ ವಿದ್ಯಾರ್ಥಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2022, 16:02 IST
Last Updated 24 ಜುಲೈ 2022, 16:02 IST
ರಸ್ತೆ ಬದಿ ಸಿಕ್ಕಿದ ಕರಿಮಣಿ ಸರವನ್ನು ಕುಮಟಾದ ವಿದ್ಯಾರ್ಥಿ ಮಂಜುನಾಥ ಹರ್ಮಲಕರ್, ಅದರ ಮಾಲೀಕರಾದ ಭಾರತಿ ಪಟಗಾರ ಅವರಿಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಭಾನುವಾರ ಹಿಂತಿರುಗಿಸಿದರು.
ರಸ್ತೆ ಬದಿ ಸಿಕ್ಕಿದ ಕರಿಮಣಿ ಸರವನ್ನು ಕುಮಟಾದ ವಿದ್ಯಾರ್ಥಿ ಮಂಜುನಾಥ ಹರ್ಮಲಕರ್, ಅದರ ಮಾಲೀಕರಾದ ಭಾರತಿ ಪಟಗಾರ ಅವರಿಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಭಾನುವಾರ ಹಿಂತಿರುಗಿಸಿದರು.   

ಕುಮಟಾ: ರಸ್ತೆ ಬದಿ ಸಿಕ್ಕಿದ್ದ ಸುಮಾರು ₹ 2.5 ಲಕ್ಷ ಮೌಲ್ಯದ ಕರಿಮಣಿ ಸರವನ್ನು ವಿದ್ಯಾರ್ಥಿಯೊಬ್ಬ ಭಾನುವಾರ ಅದರ ಮಾಲೀಕರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಪಟ್ಟಣದ ಅಳ್ವೆಕೋಡಿ ಕ್ರಾಸ್ ನಿವಾಸಿ, ಕಾರವಾರದಲ್ಲಿ ಓದುತ್ತಿರುವ ಮಂಜುನಾಥ ಹರ್ಮಲಕರ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

‘ಜುಲೈ 8ರಂದು ರಾತ್ರಿ ಕುಮಟಾದ ನ್ಯಾಯಾಲಯದ ಮೇಲ್ಭಾಗದ ರಸ್ತೆ ಬದಿ ಬೈಕ್ ನಿಲ್ಲಿಸುವಾಗ, ಹೆಡ್ ಲೈಟ್ ಬೆಳಕಿಗೆ ಕರಿಮಣಿ ಸರ ಕಂಡಿತು. ಅದನ್ನು ಎತ್ತಿಕೊಂಡು ಪಕ್ಕದ ಅಂಗಡಿಯವರಿಗೆ ನೀಡಿ, ಅದರ ವಾರಸುದಾರರು ಬಂದರೆ ಹಿಂದಿರುಗಿಸಿ ಎಂದು ಮನೆಗೆ ಹೋಗಿದ್ದೆ. ಬಳಿಕ ಪಾಲಕರಿಗೆ ವಿಷಯ ತಿಳಿಸಿದ್ದೆ. ಅವರು ಅದನ್ನು ಅಂಗಡಿಯವರಿಂದ ವಾಪಸ್ ಪಡೆಯಲು ಸೂಚಿಸಿದರು. ಅದರಂತೆ ಅದನ್ನು ಪುನಃ ಮನೆಗೆ ತಂದೆ. ಪರಿಚಯದ ಶಿಕ್ಷಕ ಕಿರಣ ನಾಯ್ಕ ಅವರಿಗೆ ಮಾಹಿತಿ ನೀಡಿದೆ’ ಎಂದು ಮಂಜುನಾಥ ವಿವರಿಸಿದರು.

ADVERTISEMENT

‘ಅವರು ಕರಿಮಣಿಯ ಫೋಟೊ ತೆಗೆದರು. ಬಳಿಕ, ಅದನ್ನು ಸುರಕ್ಷಿತವಾಗಿಟ್ಟುಕೊಂಡಿರುವ ನನ್ನ ಬಗ್ಗೆ ವಾಟ್ಸ್‌ಆ್ಯಪ್ ಗುಂಪುಗಳಲ್ಲಿ ಮಾಹಿತಿ ನೀಡಿದರು. ಇದನ್ನು ಗಮನಿಸಿದ ಬೆಟ್ಕುಳಿ ಗ್ರಾಮದ ಭಾರತಿ ಪಟಗಾರ ಎನ್ನುವವರು ನನ್ನನ್ನು ದೂರವಾಣಿ ಮೂಲಕ ಸಂಪರ್ಕಿಸಿ ತಾವು ಸರ ಕಳೆದುಕೊಂಡಿದ್ದನ್ನು ತಿಳಿಸಿದರು’ ಎಂದು ಹೇಳಿದರು.

‘ಎಲ್ಲರೂ ಸೇರಿ ಪೋಲೀಸ್ ಠಾಣೆಗೆ ತೆರಳಿ ಸಿ.ಪಿ.ಐ ತಿಮ್ಮಪ್ಪ ನಾಯ್ಕ ಹಾಗೂ ಪಿ.ಎಸ್.ಐ ನವೀನ ನಾಯ್ಕ ಅವರ ಸಮ್ಮುಖದಲ್ಲಿ ಸರವನ್ನು ವಾಪಸ್ ನೀಡಿದೇವು’ ಎಂದರು.

‘ಪಟ್ಟಣಕ್ಕೆ ಬಂದು ಕಾರಿನಿಂದ ಇಳಿಯುವ ಮುನ್ನ ಕರಿಮಣಿ ಸರವನ್ನು ತೆಗೆದು ಬ್ಯಾಗಿನಲ್ಲಿ ಹಾಕಿದ್ದೆ. ಆದರೆ, ಅದು ಸೀರೆಯ ಮೇಲೆ ಇದ್ದು ರಸ್ತೆಯ ಮೇಲೆ ಬಿದ್ದಿರಬೇಕು’ ಎಂದು ಭಾರತಿ ಪಟಗಾರ ತಿಳಿಸಿದರು. ವಿದ್ಯಾರ್ಥಿ ಮಂಜುನಾಥ್‌ಗೆ ಕೃತಜ್ಞತೆ ಸಲ್ಲಿಸಿದರು. ಶಿಕ್ಷಕ ಕಿರಣ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.