ADVERTISEMENT

ಸ್ವಚ್ಛತೆ ಕೃತಿಯಲ್ಲಿ ಅನುಷ್ಠಾನವಾಗಲಿ: ಶಾಸಕ ಭೀಮಣ್ಣ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 4:27 IST
Last Updated 3 ಅಕ್ಟೋಬರ್ 2025, 4:27 IST
ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ ಅಂಗವಾಗಿ ಶಿರಸಿಯಲ್ಲಿ ಶಾಸಕ ಭೀಮಣ್ಣ ನಾಯ್ಕ ಸ್ವಚ್ಛತೆ ಕಾರ್ಯ ನಡೆಸಿದರು
ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ ಅಂಗವಾಗಿ ಶಿರಸಿಯಲ್ಲಿ ಶಾಸಕ ಭೀಮಣ್ಣ ನಾಯ್ಕ ಸ್ವಚ್ಛತೆ ಕಾರ್ಯ ನಡೆಸಿದರು   

ಶಿರಸಿ: ‘ಸ್ವಚ್ಛತೆ ಎಂಬುದು ಮಾತಿನಲ್ಲಷ್ಟೇ ವ್ಯಕ್ತವಾಗದೆ ಕೃತಿಯಲ್ಲಿ ಅನುಷ್ಠಾನವಾದರೆ ಮಾತ್ರ ಸ್ವಸ್ಥ ಹಾಗೂ ಸ್ವಚ್ಚ ಸಮಾಜ ನಿರ್ಮಾಣ ಸಾಧ್ಯ’ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ನಗರದ ಬಿಡಕಿಬೈಲ್‍ನಲ್ಲಿ ಗುರುವಾರ ಅವರು ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ ಅಂಗವಾಗಿ ಮಹಾತ್ಮ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

‘ಮಹಾತ್ಮ ಗಾಂಧಿಯವರು ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ತಮ್ಮ ಜೀವನ ವಿಧಾನದ ಅವಿಭಾಜ್ಯ ಅಂಗವಾಗಿಸಿಕೊಂಡಿದ್ದರು ಮತ್ತು ಸ್ವಾತಂತ್ರ್ಯಕ್ಕಿಂತ ಸ್ವಚ್ಛತೆ ಮುಖ್ಯ ಎಂದು ಹೇಳಿದ್ದರು. ಸ್ವಚ್ಛತೆಯನ್ನು ಸೇವೆ ಎಂದು ಪರಿಗಣಿಸಿದ್ದ ಗಾಂಧಿಜಿ ಸಾರ್ವಜನಿಕ ಸ್ವಚ್ಛತೆಯ ಮಹತ್ವ ಸಾರಿದ್ದರು. ಅವರ ಜನ್ಮದಿನ ಸ್ಮರಣೀಯಗೊಳಿಸಲು ಸ್ವಚ್ಛತೆಗೆ ಇನ್ನಷ್ಟು ಆದ್ಯತೆ ನೀಡಬೇಕಿದೆ’ ಎಂದರು. 

ADVERTISEMENT

ಇದೇ ವೇಳೆ ಪೊರಕೆ ಹಿಡಿದು ನಗರದ ಬೀದಿಯನ್ನು ಸ್ವತಃ ಶಾಸಕರು ಗುಡಿಸಿ ಸ್ವಚ್ಛಗೊಳಿಸಿದರು. ಈ ವೇಳೆ ಶಿರಸಿ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ನಿಲ್ದಾಣದ ಆವರಣದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಸೂಚಿಸಿದರು.

ಬಸ್ ನಿಲ್ದಾಣದ ಎದುರು ನಡೆಯುತ್ತಿರುವ  ಕಾಮಗಾರಿಯನ್ನು ವೀಕ್ಷಿಸಿದ ಅವರು, ಅಧಿಕಾರಿಗಳಿಂದ ಕಾಮಗಾರಿ ವಿಷಯವಾಗಿ ಮಾಹಿತಿ ಪಡೆದುಕೊಂಡು ಆದಷ್ಟು ಬೇಗ ಸ್ಥಳ ಸರಿಪಡಿಸುವಂತೆ ಸೂಚಿಸಿದರು.

ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಪ್ರಕಾಶ ಚನ್ನಪ್ಪನವರ,  ಪ್ರಮುಖರಾದ ಜಗದೀಶ ಗೌಡ, ಜ್ಯೋತಿ ಪಾಟೀಲ, ಗೀತಾ ಶೆಟ್ಟಿ, ಪ್ರದೀಪ ಶೆಟ್ಟಿ, ಕೆ.ಎನ್.ಹೊಸ್ಮನಿ, ಖಾದರ ಆನವಟ್ಟಿ ಹಾಗೂ ಇದ್ದರು.  

ಸ್ವದೇಶಿ ಪರಿಕಲ್ಪನೆಗೆ ಒತ್ತು ನೀಡಿ: ಸಂಸದ ಕಾಗೇರಿ

ಶಿರಸಿ: ‘ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹುದ್ದೂರ ಶಾಸ್ತ್ರಿಅವರ ಸರಳ ಜೀವನ, ಆದರ್ಶ ವ್ಯಕ್ತಿತ್ವವನ್ನು ರೂಢಿಸಿಕೊಳ್ಳುವ ಮೂಲಕ ಸ್ವದೇಶಿ ಪರಿಕಲ್ಪನೆಗೆ ಹೆಚ್ಚಿನ ಒತ್ತು ನೀಡಬೇಕು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. 

ತಾಲ್ಲೂಕು ಆಡಳಿತದಿಂದ ಗುರುವಾರ ಏರ್ಪಡಿಸ ಲಾಗಿದ್ದ ಗಾಂಧಿ ಜಯಂತಿ ಹಾಗೂ ಲಾಲಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದ ಅಂಗವಾಗಿ ಬಿಡಕಿಬೈಲಿಗೆ ತೆರಳಿ ಅಲ್ಲಿರುವ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಮಾತನಾಡಿದರು.

‘ದೇಶದ ನಾಗರಿಕರು ಸ್ವದೇಶಿ ವಸ್ತುಗಳ ಬಳಕೆಗೆ ಪಣ ತೊಡಬೇಕು’ ಎಂದರು. 

‘ವಿಜಯದಶಮಿ ದಿನದಂದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶತಾಬ್ದಿ ವರ್ಷವನ್ನು ಆಚರಿಸುತ್ತಿರುವುದು ದೇಶದ ಜನರಿಗೆ ಸಂತಸ ತಂದಿದೆ. ಸಂಘವು ನಮ್ಮ ಸನಾತನ ಹಿಂದು ಧರ್ಮವನ್ನು ಜಾಗೃತಿಗೊಳಿಸುವ ಕೆಲಸವನ್ನು ಶತಮಾನಗಳಿಂದಲೂ ಮಾಡುತ್ತಲೇ ಬಂದಿದೆ’ ಎಂದು ಹೇಳಿದರು.  

ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ನಗರಸಭೆ ಸದಸ್ಯರಾದ ನಾಗರತ್ನ ಜೋಗಳೆಕರ, ಶ್ರೀಕಾಂತ ಬಳ್ಳಾರಿ, ನಗರ ಘಟಕ ಅಧ್ಯಕ್ಷ ಆನಂದ ಸಾಲೇರ, ಪ್ರಮುಖರಾದ ನಂದನ ಸಾಗರ, ನಾಗರಾಜ ನಾಯ್ಕ ಇತರರಿದ್ದರು.

ಬಳಿಕ ಸಂಸದರು ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಸ್ವಚ್ಛತಾ ಕಾರ್ಯಕ್ರಮ

ಶಿರಸಿ: ತಾಲ್ಲೂಕಿನ ಅಮ್ಮಿನಳ್ಳಿಯ ಶ್ರೀನಾಗಚೌಡೇಶ್ವರಿ ಗೆಳೆಯರ ಬಳಗದ ವತಿಯಿಂದ ಗುರುವಾರ ಗಾಂಧೀ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜನತಾ ಕಾಲೋನಿ ಬಳಿಯಲ್ಲಿ ಗಿಡ ಗಂಟೆಗಳಿಂದ ತುಂಬಿದ್ದ ಸಾರ್ವಜನಿಕ ಬಾವಿಯ ಸುತ್ತಮುತ್ತಲ ಸ್ಥಳವನ್ನು ಸ್ವಚ್ಛಗೊಳಿಸಲಾಯಿತು. ರಸ್ತೆಯಂಚಿನ ಕಸದ ರಾಶಿಯನ್ನು ತೆರವುಗೊಳಿಸಿ ಇನ್ನು ಮುಂದೆ ಅಲ್ಲಿ ಊರಿನವರು  ಕಸವನ್ನು ಎಸೆಯದಂತೆ ನೋಡಿ ಕೊಳ್ಳಬೇಕೆಂಬ ನಿರ್ಧಾರ ಕೈಗೊಳ್ಳುವ ಜತೆಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಯಿತು. ಕಾಲೊನಿಯ ಸುತ್ತಮುತ್ತ ಸ್ವಚ್ಛ ಪರಿಸರ ನಿರ್ಮಾಣದ ಪಣ ತೊಡಲಾಯಿತು.

ಗೆಳೆಯರ ಬಳಗದ ಗಣೇಶ, ಪ್ರವೀಣ, ರಾಮಚಂದ್ರ, ನಾಗರಾಜ. ಜಿ, ದಿನೇಶ, ಮಂಜುನಾಥ್, ಊರಿನವರಾದ ಗುರುಪ್ರಸಾದ, ಶ್ರೀಶಾಂತ, ಪ್ರಜ್ವಲ, ದರ್ಶನ, ತಿಲಕ, ಜಿಕ್ರಿಯಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.