ADVERTISEMENT

ಗೋಕರ್ಣ: ಗೋಮಯದಿಂದ ತಯಾರಿಸಿದ ಕಾಗದ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2022, 14:30 IST
Last Updated 25 ಜುಲೈ 2022, 14:30 IST
ರಾಮಚಂದ್ರಾಪುರ ಮಠದ ಕಾಮದುಘಾ ಮತ್ತು ಸಂಶೋಧನಾ ಖಂಡವು ಗೋಮಯದಿಂದ ತಯಾರಿಸಿದ ಕಾಗದವನ್ನು ರಾಘವೇಶ್ವರ ಭಾರತಿ ಸ್ವಾಮೀಜಿ, ಗೋಕರ್ಣದಲ್ಲಿ ಸೋಮವಾರ ಬಿಡುಗಡೆ ಮಾಡಿದರು.
ರಾಮಚಂದ್ರಾಪುರ ಮಠದ ಕಾಮದುಘಾ ಮತ್ತು ಸಂಶೋಧನಾ ಖಂಡವು ಗೋಮಯದಿಂದ ತಯಾರಿಸಿದ ಕಾಗದವನ್ನು ರಾಘವೇಶ್ವರ ಭಾರತಿ ಸ್ವಾಮೀಜಿ, ಗೋಕರ್ಣದಲ್ಲಿ ಸೋಮವಾರ ಬಿಡುಗಡೆ ಮಾಡಿದರು.   

ಕಾರವಾರ: ರಾಮಚಂದ್ರಾಪುರ ಮಠದ ಕಾಮದುಘಾ ಮತ್ತು ಸಂಶೋಧನಾ ಖಂಡವು ಗೋಮಯದಿಂದ ತಯಾರಿಸಿದ ಕಾಗದವನ್ನು, ರಾಘವೇಶ್ವರ ಭಾರತಿ ಸ್ವಾಮೀಜಿ ಸೋಮವಾರ ಗೋಕರ್ಣದ ಅಶೋಕೆಯಲ್ಲಿ ಬಿಡುಗಡೆ ಮಾಡಿದರು.

‘ಭಾರತೀಯ ಗೋತಳಿಯ ಸಂವರ್ಧನೆ, ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಕಾಮದುಘಾ, ಗೋಮಯ ಕಾಗದ ತಯಾರಿಸಿರುವುದು ಅತ್ಯಂತ ಅರ್ಥಪೂರ್ಣ. ಮಠದಲ್ಲಿ ಇಂಥ ಪರಿಸರಸ್ನೇಹಿ ಕಾಗದದ ಬಳಕೆಯನ್ನು ಸಾಧ್ಯವಿರುವ ಎಲ್ಲ ಕಡೆಗಳಲ್ಲಿ ಮಾಡಲಾಗುವುದು’ ಎಂದು ಸ್ವಾಮೀಜಿ ಹೇಳಿದರು.

‘ಇದು ರಾಸಾಯನಿಕ ಮುಕ್ತವಾಗಿದೆ. ಹಾಗಾಗಿ ಪರಿಸರ ಸ್ನೇಹಿಯಾಗಿದೆ. ಅಲ್ಲದೇ ಗೋವಿನ ಉತ್ಪನ್ನಗಳ ಮೌಲ್ಯವರ್ಧನೆಯಲ್ಲೂ ಮಹತ್ವದ ಅಂಶ ಎನಿಸಲಿದೆ. ಮಠದ ಭಕ್ತರು ಮತ್ತು ಸಾರ್ವಜನಿಕರು ಇಂಥ ಪ್ರಯೋಗಗಳ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ADVERTISEMENT

ಗೋಮಯ ಕಾಗದದಲ್ಲಿ ಮುದ್ರಿಸಿದ ವಿವಾಹ ಆಮಂತ್ರಣವನ್ನೂ ಸ್ವಾಮೀಜಿ ಬಿಡುಗಡೆ ಮಾಡಿದರು.

ಕಾಮದುಘಾ ವಿಭಾಗದ ಡಾ.ವೈ.ವಿ.ಕೃಷ್ಣಮೂರ್ತಿ ಮಾತನಾಡಿ, ‘ಈ ವಿಶಿಷ್ಟ ಕಾಗದವನ್ನು ಶುದ್ಧ ದೇಸಿ ಗೋವಿನ ಸೆಗಣಿಯಿಂದ ತಯಾರಿಸಲಾಗಿದೆ. ಇದೇ ಮೊದಲ ಬಾರಿಗೆ ಇದನ್ನು ಸಿದ್ಧಪಡಿಸಲಾಗಿದೆ’ ವಿವರಿಸಿದರು.

‘ಸಾಮಾನ್ಯ ಕಾಗದ ಉತ್ಪಾದನೆಗೆ ಮರ ಹಾಗೂ ನೀರು ವ್ಯಾಪಕವಾಗಿ ಬಳಕೆಯಾಗುತ್ತದೆ. ಪರಿಸರಕ್ಕೆ ಇದು ದೊಡ್ಡ ಹೊರೆಯಾಗಿದೆ. ವಿದೇಶಗಳಲ್ಲಿ ಇಂದು ಇಂಥ ಪರಿಸರ ಸ್ನೇಹಿ ಉತ್ಪನ್ನಗಳಿಗೆ ವ್ಯಾಪಕ ಬೇಡಿಕೆ ಇದೆ. ನಾವೂ ಇದರ ಮಹತ್ವ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಸಂಶೋಧನಾ ಖಂಡದ ಡಾ.ರವಿ ಪಾಂಡವಪುರ, ಲೋಕಸಂಪರ್ಕ ವಿಭಾಗದ ಶಿಶಿರ್ ಹೆಗಡೆ, ಮಾಧ್ಯಮ ವಿಭಾಗದ ಉದಯಶಂಕರ ಮಿತ್ತೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.