ಶಿರಸಿ: ಮನುಷ್ಯ ಆರೋಗ್ಯವಂತನಾಗಿರಲು ಆಹಾರ, ನಿದ್ರೆ, ಅನುಷ್ಠಾನ ಈ ಮೂರು ಸೂತ್ರಗಳನ್ನು ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ಚಾತುರ್ಮಾಸ್ಯದ ವ್ರತಾಚರಣೆ ಅಂಗವಾಗಿ ಶಿರಸಿ ಸೀಮಾ ಒಳಭಾಗಿ ಶಿಷ್ಯರು ಗುರುವಾರ ನೀಡಿದ ಸೇವೆಯನ್ನು ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು. ಮಿತವಾದ, ಯುಕ್ತವಾದ, ಅನುಕೂಲಕರವಾದ ಆಹಾರ ಸೇವಿಸಬೇಕು. ಸರಿಯಾದ ವೇಳೆಗೆ ಸೇವಿಸುವುದು ಉತ್ತಮ. ಹೊರಗಿನ ಆಹಾರ ಸೇವನೆಯಿಂದ ಆರೋಗ್ಯ ಕೆಡುತ್ತದೆ ಎಂದರು.
ಮನುಷ್ಯನ ಶರೀರಕ್ಕೆ ಸರಿಯಾದ ನಿದ್ರೆ ಅವಶ್ಯ. ನಿದ್ರೆ ಎಂದರೆ ಸಂಪೂರ್ಣ ವಿಶ್ರಾಂತಿ. ವಿಶ್ರಾಂತಿಯಿಂದಲೇ ಮನುಷ್ಯನ ಅನೇಕ ರೋಗಗಳು ಶಮನವಾಗುತ್ತವೆ. ಮನಸ್ಸು ಕೂಡ ಶಾಂತವಾಗಿರುತ್ತದೆ. ಮನಸ್ಸು ಆರೋಗ್ಯದ ಭಾಗವಾಗಿದ್ದು, ಮನಸ್ಸಿಗೆ ಒಳ್ಳೆಯ ವಿಚಾರಗಳನ್ನೇ ನೀಡಬೇಕು. ಮನಸ್ಸು ಶಾಂತವಾಗಿರಲು ಧ್ಯಾನ, ಪೂಜೆ, ಜಪ, ಆಧ್ಯಾತ್ಮಿಕ ಚಿಂತನೆಗಳನ್ನು ಅನುಷ್ಠಾನಗೊಳಿಸಬೇಕು ಎಂದರು.
ಶಿರಸಿ ಸೀಮಾ ಒಳಭಾಗಿಯ ಕೆಲವೇ ಶಿಷ್ಯರು, ಪಾದುಕಾಸೇವೆ ಮತ್ತು ಭಿಕ್ಷಾವಂದನೆ ಹಾಗೂ ವಿವಿಧ ಸೇವೆಗಳನ್ನು ಸಲ್ಲಿಸಿದರು. ಎಸ್.ಎನ್. ಗಾಂವಕರ್ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.