ಶಿರಸಿ: ತಾಂತ್ರಿಕ ದೋಷದ ಕಾರಣಕ್ಕೆ ಭಾರತೀಯ ನೌಕಾದಳಕ್ಕೆ ಸೇರಿದ ಎನ್-741 ಹೆಲಿಕಾಪ್ಟರ್ ತಾಲ್ಲೂಕಿನ ದಾಸನಕೊಪ್ಪ ಗ್ರಾಮದ ಎಪಿಎಂಸಿ ಮೈದಾನದಲ್ಲಿ ಶುಕ್ರವಾರ ಮಧ್ಯಾಹ್ನ 3.30ರ ಸುಮಾರಿಗೆ ತುರ್ತು ಭೂಸ್ಪರ್ಶ ಮಾಡಿತು.
ಗೋವಾದಿಂದ ಬೆಂಗಳೂರಿನತ್ತ ಹೆಲಿಕಾಪ್ಟರ್ ತೆರಳುತ್ತಿತ್ತು. ಇಬ್ಬರು ಪೈಲಟ್ ಮತ್ತು ಒಬ್ಬ ಕಮಾಂಡರ್ ಇದ್ದರು. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ಏಕಾಏಕಿ ಹೆಲಿಕಾಪ್ಟರ್ ಇಳಿದಿದ್ದನ್ನು ಕಂಡ ಗ್ರಾಮಸ್ಥರು ಅಚ್ಚರಿಗೊಳಗಾದರು. ಹೆಲಿಕಾಪ್ಟರ್ ನೋಡಲು ನೂರಾರು ಜನ ಜಮಾಯಿಸಿದ್ದರು. ಅವರನ್ನು ಬನವಾಸಿ ಠಾಣೆ ಪೊಲೀಸರು ನಿಯಂತ್ರಿಸಿ, ಹೆಲಿಕಾಪ್ಟರ್ಗೆ ರಕ್ಷಣೆ ನೀಡಿದರು.
‘ಆಗಸದಲ್ಲಿ ಮೂರು ಸುತ್ತು ಹೆಲಿಕಾಪ್ಟರ್ ತಿರುಗಿತ್ತು. ಆಗ ನಮಗೆ ಆತಂಕವಾಯಿತು. ಕೆಲವು ನಿಮಿಷಗಳ ಬಳಿಕ ಅದು ಸುರಕ್ಷಿತವಾಗಿ ಇಳಿಯಿತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.
ಒಂದೂವರೆ ಗಂಟೆ ಬಳಿಕ ಗೋವಾದಿಂದ ತಂತ್ರಜ್ಞರು ಇನ್ನೊಂದು ಹೆಲಿಕಾಪ್ಟರ್ನಲ್ಲಿ ಬಂದು ತಾಂತ್ರಿಕ ಸಮಸ್ಯೆ ಪರಿಹರಿಸುವ ಕೆಲಸ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.