ಶಿರಸಿ: ಕೋವಿಡ್ 19 ಸಾಂಕ್ರಾಮಿಕ ಕಾಯಿಲೆ ಹೆಚ್ಚುತ್ತಿರುವುದರಿಂದ ಶಾಲೆಗಳ ಪ್ರಾರಂಭದ ದಿನಾಂಕ ನಿಗದಿಯಾಗಿಲ್ಲ. ಆದರೆ, ಮಕ್ಕಳು ಶಿಕ್ಷಣದಿಂದ ವಿಮುಖರಾಗಬಾರದೆಂಬ ಕಾರಣಕ್ಕೆ ಶಿಕ್ಷಣ ಇಲಾಖೆ ಮಕ್ಕಳಿಗೆ ಪಠ್ಯಪುಸ್ತಕ ಪೂರೈಸುವ ಕಾರ್ಯ ಪ್ರಾರಂಭಿಸಿದೆ.
ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೊಯಿಡಾ ತಾಲ್ಲೂಕುಗಳಲ್ಲಿ ಕಳೆದ 10 ದಿನಗಳಿಂದ ಪಠ್ಯಪುಸ್ತಕ ವಿತರಣೆ ನಡೆಯುತ್ತಿದೆ. ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬಂದಿರುವ ಪುಸ್ತಕಗಳನ್ನು, ಪ್ರತಿ ಶಾಲೆಗೆ ತಲುಪಿಸಲಾಗಿದೆ. ಮಕ್ಕಳಿಗೆ ಪುಸ್ತಕ ವಿತರಿಸುವ ಜವಾಬ್ದಾರಿಯನ್ನು ಆಯಾ ಶಾಲೆಯ ಶಿಕ್ಷಕರು ವಹಿಸಿಕೊಂಡಿದ್ದಾರೆ. ಕೊರೊನಾ ಸೋಂಕು ವ್ಯಾಪಿಸುತ್ತಿರುವ ಕಾರಣ ಪಾಲಕರು ಶಾಲೆಗೆ ಬಂದು ಮಕ್ಕಳ ಪುಸ್ತಕ ಸಂಗ್ರಹಿಸುತ್ತಿದ್ದಾರೆ.
2020–21ನೇ ಸಾಲಿಗೆ ಶೈಕ್ಷಣಿಕ ಜಿಲ್ಲೆಗೆ ಅಗತ್ಯವಿರುವ ಶೇ 88.98ರಷ್ಟು ಪುಸ್ತಕಗಳು ಪೂರೈಕೆಯಾಗಿವೆ. ಶೈಕ್ಷಣಿಕ ಜಿಲ್ಲೆಗೆ ಉಚಿತ 9,55,033, ಮಾರಾಟಕ್ಕೆ 1,37,922 ಸೇರಿ ಒಟ್ಟು 10,92,955 ಪಠ್ಯಪುಸ್ತಕಗಳ ಬೇಡಿಕೆ ಸಲ್ಲಿಸಲಾಗಿತ್ತು. ಅವುಗಳಲ್ಲಿ ಉಚಿತ8,49,808, ಮಾರಾಟದ 1,36,766 ಪುಸ್ತಕಗಳು ಪೂರೈಕೆಯಾಗಿವೆ ಎಂದು ಡಿಡಿಪಿಐ ದಿವಾಕರ ಶೆಟ್ಟಿ ತಿಳಿಸಿದರು.
ಎಂಟನೇ ತರಗತಿಗೆ ಭಾಷಾ ವಿಷಯ ಹೊರತುಪಡಿಸಿ, ಇನ್ನುಳಿದ ವಿಷಯಗಳ ಪುಸ್ತಕ ಪರಿಷ್ಕರಣೆಯಾಗಿದೆ. ಈ ಪುಸ್ತಕಗಳು ಶೇ 100ರಷ್ಟು ಬಂದಿವೆ. ಅನೇಕ ಶಾಲೆಗಳ ಶಿಕ್ಷಕರು ಆನ್ಲೈನ್ ತರಗತಿ ನಡೆಸುತ್ತಿದ್ದಾರೆ. ಇನ್ನು ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಹೋಂ ವರ್ಕ್ ನೀಡುವ ಮೂಲಕ ಪಾಠ ಮಾಡುತ್ತಿದ್ದಾರೆ. ಮಕ್ಕಳು ಕಲಿತಿದ್ದನ್ನು ಮರೆಯಬಾರದು ಮತ್ತು ಹೊಸದಾಗಿ ಕಲಿಯುವಾಗ ಪುಸ್ತಕ ಇದ್ದರೆ ಅನುಕೂಲ ಎಂಬ ಕಾರಣಕ್ಕೆ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ನೀಡಲಾಗಿದೆ ಎಂದು ಅವರು ವಿವರಿಸಿದರು.
‘ಹಿಂದಿನ ವರ್ಷದ ಪುಸ್ತಕ ಆಧರಿಸಿ, ಮಕ್ಕಳಿಗೆ ಹೋಂ ವರ್ಕ್ ಕೊಡುತ್ತಿದ್ದೆವು. ಈಗ ಪುಸ್ತಕಗಳು ಬಂದಿರುವುದರಿಂದ ಅದನ್ನು ಮಕ್ಕಳಿಗೆ ತಲುಪಿಸಿದ್ದೇವೆ. ಮಕ್ಕಳು ಪುಸ್ತಕ ನೋಡಿಕೊಂಡು ಹೋಂ ವರ್ಕ್ ಮಾಡಲು ಅನುಕೂಲವಾಗುತ್ತದೆ’ ಎಂದು ಶಿಕ್ಷಕಿ ಲಲಿತಾ ಭಟ್ಟ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.