ಯಲ್ಲಾಪುರ: ತಾಲ್ಲೂಕಿನ ಕಳಚೆಯಲ್ಲಿ ಗುರುವಾರ ರಾತ್ರಿ ಗುಡ್ಡ ಕುಸಿದು ಮನೆಯೊಳಗೆ ಬಿದ್ದಿದೆ. ಆರ್.ವಿ.ಭಟ್ ಹೊಸಕುಂಬ್ರಿ ಎಂಬುವವರ ಮನೆಯ ಹಿಂಬದಿಯ ಸುಮಾರು ಒಂದು ಎಕರೆ ಅಡಿಕೆ ತೋಟ ಮತ್ತು ಎರಡು ಎಕರೆ ಗೇರು ನೆಡುತೋಪು ನೆಲಸಮವಾಗಿದೆ.
ಮನೆಗಳಿಗೆ ಬರುವ ರಸ್ತೆ ಸಂಪೂರ್ಣವಾಗಿ ಮುಚ್ಚಿ ಹೋಗಿದೆ. ಇನ್ನು ಮನೆ ಕುಸಿಯುವ ಆತಂಕವಿದ್ದು, ಜೀವದ ಭಯವಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಸಮೀಪದಲ್ಲಿ ಹರಿಯುತ್ತಿರುವ ಹಳ್ಳ ತುಂಬಿ ಹರಿಯುತ್ತಿದ್ದು, ಗುಡ್ಡದಿಂದ ನೀರು ಹರಿದು ಬರುತ್ತಿದೆ. ಇದರಿಂದ ಮತ್ತಷ್ಟು ಆತಂಕ ಮೂಡಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕಳಚೆಯ ನಾರಾಯಣ ಎನ್ನುವವರ ಮನೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಮಹಿಳೆಯೊಬ್ಬರು ಕುಸಿದುಬಿದ್ದ ಮನೆಯಲ್ಲಿ ಮನೆಯಲ್ಲಿ ಸಿಲುಕಿಕೊಂಡಿರಬಹುದು ಎನ್ನಲಾಗುತ್ತಿದೆ. ಮಕ್ಕಳನ್ನು ರಕ್ಷಿಸಲಾಗಿದೆ ಹಾಗೂ ಪಿ.ಜಿ.ಹೆಗಡೆ ಎನ್ನುವವರ ದನದ ಕೊಟ್ಟಿಗೆಯ ಸಂಪೂರ್ಣ ನೆಲಸಮವಾಗಿದ್ದು ಜಾನುವಾರು ಸಿಲುಕಿಕೊಂಡು ಅಸುನೀಗಿದೆ.
ಜೊಯಿಡಾ ವರದಿ: ಕದ್ರಾ– ಅಣಶಿ ಮಾರ್ಗ ಮಧ್ಯದ ಅಣಶಿ ಘಟ್ಟದಲ್ಲಿ ಸದಾಶಿವಗಡ– ಬೆಳಗಾವಿ ರಾಜ್ಯ ಹೆದ್ದಾರಿಯ ಮೇಲೆ ಶುಕ್ರವಾರ ಬೆಳಿಗ್ಗೆ ಎರಡು ಕಡೆಗಳಲ್ಲಿ ಗುಡ್ಡ ಕುಸಿದಿದೆ. ಇದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಗುರುವಾರ ಸಂಜೆಯೂ ಒಂದು ಕಡೆ ಗುಡ್ಡ ಕುಸಿತವಾಗಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಅದನ್ನು ರಾತ್ರಿಯೇ ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ಇದನ್ನೂ ಓದಿ... ಯಲ್ಲಾಪುರ: ಶಿರ್ಲೆ ಜಲಪಾತದ ಬಳಿ ನಾಪತ್ತೆಯಾಗಿದ್ದವರು ಪತ್ತೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.