ADVERTISEMENT

ಅಡಿಕೆ ಗೊನೆ ಕಳ್ಳತನ ಯತ್ನ: ರಾತ್ರಿ ವೇಳೆ ಬೀಟ್ ವ್ಯವಸ್ಥೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2021, 14:43 IST
Last Updated 7 ನವೆಂಬರ್ 2021, 14:43 IST
ಶಿರಸಿ ತಾಲ್ಲೂಕಿನ ಮಣ್ಕಣಿಯಲ್ಲಿ ಅಪರಿಚಿತರು ಹೊತ್ತೊಯ್ಯಲು ಕೊಯ್ಲು ಮಾಡಿದ್ದ ಅಡಿಕೆ ಗೊನೆಗಳು
ಶಿರಸಿ ತಾಲ್ಲೂಕಿನ ಮಣ್ಕಣಿಯಲ್ಲಿ ಅಪರಿಚಿತರು ಹೊತ್ತೊಯ್ಯಲು ಕೊಯ್ಲು ಮಾಡಿದ್ದ ಅಡಿಕೆ ಗೊನೆಗಳು   

ಶಿರಸಿ: ತಾಲ್ಲೂಕಿನ ನೆಗ್ಗು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಣ್ಕಣಿ ಗ್ರಾಮದಲ್ಲಿ ಶನಿವಾರ ರಾತ್ರಿ ಅಪರಿಚಿತರು ಅಡಿಕೆ ಗೊನೆಗಳನ್ನು ಕದಿಯುವ ಪ್ರಯತ್ನ ನಡೆಸಿದ್ದು ರೈತರ ಆತಂಕಕ್ಕೆ ಕಾರಣವಾಗಿದೆ.

‘ತಡರಾತ್ರಿ ನಾಯಿಗಳು ಬೊಗಳಲಾರಂಭಿಸಿದ್ದವು. ತೊಟಕ್ಕೆ ಹಂದಿ ದಾಳಿ ಇಟ್ಟಿರಬಹುದು ಎಂದು ಊಹಿಸಿದ್ದೆವು. ತೋಟದಲ್ಲಿ ಬೆಳಕು ಕಂಡಾಗ ಆತಂಕವಾಯಿತು. ಕೆಲವು ರೈತರು ಸೇರಿ ತೆರಳಿದಾಗ ಅಪರಿಚಿತರು ಓಡಿ ಹೋದರು’ ಎಂದು ಗ್ರಾಮಸ್ಥ ನಾಗರಾಜ ಹೆಗಡೆ ತಿಳಿಸಿದ್ದಾರೆ.

‘ಸೀತಾರಾಮ ಹೆಗಡೆ, ಪ್ರಭಾಕರ ಹೆಗಡೆ, ನಾಗರಾಜ ಹೆಗಡೆ, ಗುರುನಾಥ ಹೆಗಡೆ, ರವೀಂದ್ರ ಹೆಗಡೆ, ರಾಮಚಂದ್ರ ಹೆಗಡೆ ಅವರಿಗೆ ಸೇರಿದ ತೊಟದಲ್ಲಿ ಅಡಿಕೆ ಗೊನೆಗಳನ್ನು ಇಳಿಸಿದ್ದು ಕಂಡುಬಂದಿದೆ. ಖಾಲಿ ಚೀಲಗಳು ಪತ್ತೆಯಾಗಿವೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಕೆಲ ತಿಂಗಳಿನಿಂದ ಅಡಿಕೆ ದರ ಏರಿಕೆ ಗತಿಯಲ್ಲಿ ಇರುವುದೇ ಅಡಿಕೆ ಕಳ್ಳತನಕ್ಕೆ ಕಾರಣವಿರಬಹುದು ಎಂಬುದು ರೈತರ ಅಭಿಪ್ರಾಯ. ಮಣ್ಕಣಿಯಲ್ಲಿ ಕಳ್ಳತನ ಯತ್ನ ನಡೆದಿ ಸುದ್ದಿ ಸುತ್ತಮುತ್ತಲ ಊರಿನಲ್ಲಿ ಹರಡಿದ ಬಳಿಕ ರೈತರು ಆತಂಕಿತರಾಗಿದ್ದಾರೆ. ರಾತ್ರಿ ವೇಳೆ ತೋಟದಲ್ಲಿ ಪಾಳಿ ಪ್ರಕಾರ ಕಾವಲಿ ನಡೆಸಲು ಈಗಾಗಲೆ ಹಲವು ಊರುಗಳಲ್ಲಿ ನಿರ್ಧರಿಸಲಾಗಿದೆ.

‘ಕಳ್ಳತನಕ್ಕೆ ಯತ್ನಿಸಿದ ಬಗ್ಗೆ ಈವರೆಗೆ ರೈತರು ದೂರು ನೀಡಿಲ್ಲ. ಮಾಹಿತಿ ಆಧರಿಸಿ ಸಿಬ್ಬಂದಿ ಗ್ರಾಮಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಬೆಳೆ ಕೊಯ್ಲಿನ ಅವಧಿ ಆಗಿರುವ ಹಿನ್ನೆಲೆಯಲ್ಲಿ ಪ್ರತಿ ಗ್ರಾಮದಲ್ಲೂ ರಾತ್ರಿ ವೇಳೆ ಬೀಟ್ ವ್ಯವಸ್ಥೆ ಬಲಪಡಿಸಲಾಗುವದು’ ಎಂದು ಸಿಪಿಐ ರಾಮಚಂದ್ರ ನಾಯಕ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.