ADVERTISEMENT

ಮುಂಡಗೋಡ | ಕಳವು: ಇಬ್ಬರು ಮಹಿಳೆಯರ ಬಂಧನ

​ಪ್ರಜಾವಾಣಿ ವಾರ್ತೆ
Published 27 ಜನವರಿ 2024, 14:12 IST
Last Updated 27 ಜನವರಿ 2024, 14:12 IST
ಕಳ್ಳತನದ ಆರೋಪದ ಮೇಲೆ ಇಬ್ಬರು ಮಹಿಳಾ ಕಳ್ಳರನ್ನು ಮುಂಡಗೋಡ ಪೊಲೀಸರು ಬಂಧಿಸಿ ಅವರಿಂದ ಬಂಗಾರದ ಆಭರಣ ಹಾಗೂ ನಗದು ವಶಪಡಿಸಿಕೊಂಡಿರುವುದು
ಕಳ್ಳತನದ ಆರೋಪದ ಮೇಲೆ ಇಬ್ಬರು ಮಹಿಳಾ ಕಳ್ಳರನ್ನು ಮುಂಡಗೋಡ ಪೊಲೀಸರು ಬಂಧಿಸಿ ಅವರಿಂದ ಬಂಗಾರದ ಆಭರಣ ಹಾಗೂ ನಗದು ವಶಪಡಿಸಿಕೊಂಡಿರುವುದು   

ಮುಂಡಗೋಡ: ಶಿರಸಿ ಹಾಗೂ ಮುಂಡಗೋಡಿನಲ್ಲಿ ಕಳವು ಮಾಡಿದ್ದ ಆರೋಪದ ಮೇಲೆ ಇಬ್ಬರು ಮಹಿಳೆಯರನ್ನು ಇಲ್ಲಿಯ ಪೊಲೀಸರು ಬಂಧಿಸಿ, ಅವರಿಂದ ₹ 6 ಲಕ್ಷ ಮೌಲ್ಯದ ಬಂಗಾರ, ₹ 20 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹನಮಂತನಗರದ ನಿವಾಸಿಗಳಾದ ಶಾಂತಿ ವೆಂಕಟರಮಣ ಕಲ್ಲವಡ್ಡರ (31) ಹಾಗೂ ಮೀನಾಕ್ಷಿ ಪರಮೇಶ ಕಲ್ಲವಡ್ಡರ (38) ಬಂಧಿತರು.

2022ರ ಮೇ 16ರಂದು ತಾಲ್ಲೂಕಿನ ಚಿಗಳ್ಳಿ ಗ್ರಾಮದ ಮಹಿಳೆಯೊಬ್ಬರು ಎಸ್‌ಬಿಐನಿಂದ ₹ 49 ಸಾವಿರ ಹಣ ಡ್ರಾ ಮಾಡಿಕೊಂಡು ಪರ್ಸ್‌ನಲ್ಲಿ ಇಟ್ಟುಕೊಂಡು ಹೋಗುತ್ತಿರುವಾಗ, ಆರೋಪಿ ಮಹಿಳೆಯರು ಪರ್ಸ್‌ ಕಳವು ಮಾಡಿದ್ದರು. ಈ ಕುರಿತು ಇಲ್ಲಿನ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೋಲಿಸರು, ಭದ್ರಾವತಿ ಮೂಲದ ಇಬ್ಬರನ್ನು ಬಂಧಿಸಿದ್ದಾರೆ.

ADVERTISEMENT

ಇದಲ್ಲದೇ, ಶಿರಸಿಯ ಹಳೆಯ ಬಸ್‌ ನಿಲ್ದಾಣ ಹಾಗೂ ನಿಲೇಕಣಿ ಬಸ್‌ ನಿಲ್ದಾಣಗಳಲ್ಲಿ 10 ತೊಲೆ ಬಂಗಾರ ಕಳವು ಮಾಡಿದ್ದ ಪ್ರಕರಣಗಳನ್ನೂ ತನಿಖೆಯ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಸಿಪಿಐ ಬಿ.ಎಸ್‌. ಲೋಕಾಪುರ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿಷ್ಣುವರ್ಧನ, ಹೆಚ್ಚುವರಿ ಎಸ್‌.ಪಿ ಎಸ್‌.ಟಿ. ಜಯಕುಮಾರ, ಜಗದೀಶ ನಾಯ್ಕ, ಶಿರಸಿ ಡಿಎಸ್‌ಪಿ ಕೆ.ಎಲ್. ಗಣೇಶ ಮಾರ್ಗದರ್ಶನದಲ್ಲಿ ಸಿಪಿಐ ಬಿ.ಎಸ್. ಲೋಕಾಪುರ, ಪಿಎಸ್‌ಐ ಪರಶುರಾಮ ಮಿರ್ಜಗಿ, ಪಿಎಸ್‌ಐ ಹನಮಂತ ಕುಡಗುಂಟಿ, ಎಎಸ್‌ಐ ಗಂಗಾಧರ ಹೊಂಗಲ, ಎಎಸ್‌ಐ ಗೀತಾ ಕಲಘಟಗಿ, ಸಿಬ್ಬಂದಿ ಗಣಪತಿ ಹೊನ್ನಳ್ಳಿ, ಕೋಟೇಶ್ವರ ನಾಗರವಳ್ಳಿ, ಅಣ್ಣಪ್ಪ ಬುಡಗೇರ, ಮಹಾಂತೇಶ ಮುಧೋಳ, ತಿರುಪತಿ, ಜ್ಯೋತಿ ಬನವಾಸಿ, ಪುಷ್ಪಾ, ಶಾಲಿನಿ, ರೇಖಾ ಆರೋಪಿಗಳನ್ನು ಬಂಧಿಸುವ ತಂಡದಲ್ಲಿದ್ದರು. ಪ್ರಕರಣ ಬೇಧಿಸಿರುವ ತಂಡವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.