ADVERTISEMENT

ಹೊನ್ನಾವರ: ತಂಬಾಕು ಉತ್ಪನ್ನ ಮಾರಾಟ ಜೋರು–ಪ್ರಕರಣ ದಾಖಲಿಸದ ಅಧಿಕಾರಿಗಳು

ಪಟ್ಟಣಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಅಧಿಕ:ಪರಿಸರಕ್ಕೆ ಹಾನಿ ಆರೋಪ

ಎಂ.ಜಿ.ಹೆಗಡೆ
Published 17 ಜನವರಿ 2026, 4:57 IST
Last Updated 17 ಜನವರಿ 2026, 4:57 IST
ತಂಬಾಕು ಉತ್ಪನ್ನ ಮಾರಾಟ ನಿಯಂತ್ರಣಾ ಸಮಿತಿಯ ಸದಸ್ಯರು ಕಳೆದ ವಷರ್ಾಂತ್ಯದಲ್ಲಿ ಕಾಸರಕೋಡಿನ ಅಂಗಡಿಯೊಂದರ ಮುಂದೆ ಕೋಪ್ಟಾ ಕಾಯ್ದೆ ಕುರಿತು ಜಾಗೃತಿ ಮೂಡಿಸುವ ಫಲಕ ಪ್ರದಶರ್ಿಸಿದರು.              
ತಂಬಾಕು ಉತ್ಪನ್ನ ಮಾರಾಟ ನಿಯಂತ್ರಣಾ ಸಮಿತಿಯ ಸದಸ್ಯರು ಕಳೆದ ವಷರ್ಾಂತ್ಯದಲ್ಲಿ ಕಾಸರಕೋಡಿನ ಅಂಗಡಿಯೊಂದರ ಮುಂದೆ ಕೋಪ್ಟಾ ಕಾಯ್ದೆ ಕುರಿತು ಜಾಗೃತಿ ಮೂಡಿಸುವ ಫಲಕ ಪ್ರದಶರ್ಿಸಿದರು.                 

ಹೊನ್ನಾವರ: ತಾಲ್ಲೂಕಿನಲ್ಲಿ ತಂಬಾಕು ಉತ್ಪನ್ನಗಳ ಅಕ್ರಮ ಮಾರಾಟ ನಿಯಂತ್ರಣ ಮಿತಿಮೀರಿದ್ದು ಜನರ ಸ್ವಾಸ್ಥ್ಯ ಹಾಳಾಗುತ್ತಿರುವ ಜೊತೆಗೆ ಇಂಥ ವಸ್ತುಗಳನ್ನು ಬಳಸಿ ಎಸೆದ ತ್ಯಾಜ್ಯಗಳು ಸುತ್ತಲಿನ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರು ಹೆಚ್ಚುತ್ತಿದೆ.

ತಂಬಾಕು ಉತ್ಪನ್ನಗಳ ಸಾರ್ವಜನಿಕ ಬಳಕೆ ನಿಯಂತ್ರಣ ಕಾಯ್ದೆ (ಕೋಟ್ಪಾ) ಪ್ರಕಾರ ಶಾಲೆಗಳಿಂದ ನೂರು ಮೀಟರ್ ಅಂತರದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಳಿಗೆಗಳಿರಬಾರದು, 21 ವರ್ಷದೊಳಗಿವರಿಗೆ ಇಂಥ ಉತ್ಪನ್ನ ಮಾರಾಟ ಮಾಡಬಾರದು, ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಪ್ರದರ್ಶಿಸಬಾರದು, ಇಂಥ ಜಾಹಿರಾತು ಫಲಕ ಅಂಟಿಸಬಾರದು ಎಂಬಿತ್ಯಾದಿ ನಿಯಮಗಳಿವೆ. ಆದರೆ, ಪಟ್ಟಣವೂ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ನಿಯಮಗಳ ಉಲ್ಲಂಘನೆಯಾಗುತ್ತಿದೆ ಎಂಬುದು ಜನರ ದೂರು.

ಕೋಟ್ಪಾ ಕಾಯಿದೆ ಅನುಷ್ಠಾನಗೊಳಿಸಲು ತಹಶೀಲ್ದಾರರ ನೇತೃತ್ವದಲ್ಲಿ ತಾಲ್ಲೂಕು ಸಮಿತಿಯಿದ್ದು ಆರೋಗ್ಯ ಇಲಾಖೆ, ಸೇರಿ ಹಲವು ಇಲಾಖೆಗಳ ಅಧಿಕಾರಿಗಳು ಸಮಿತಿ ಸದಸ್ಯರಾಗಿದ್ದಾರೆ. ವರ್ಷಕ್ಕೆ ಮೂರ್ನಾಲ್ಕು ಬಾರಿ ಸಮಿತಿ ಕೆಲವೆಡೆ ಅಂಗಡಿಗಳನ್ನು ತಪಾಸಣೆ ಮಾಡುತ್ತಿದೆಯಾದರೂ ಇವು ಕೇವಲ ಔಪಚಾರಿಕವೆಂಬಂತೆ ನಡೆಯುತ್ತಿವೆ ಎನ್ನುವ ಟೀಕೆ ವ್ಯಕ್ತವಾಗಿದೆ.

ADVERTISEMENT

‘ಅಧಿಕಾರಿಗಳಿಗೆ ಅವರವರ ಕಚೇರಿ ಕೆಲಸಗಳ ಒತ್ತಡ,ಎಲ್ಲ ಇಲಾಖೆಗಳ ಅಧಿಕಾರಿಗಳು ಸೇರಿ ದಾಳಿ ದಿನಾಂಕ ನಿಗದಿಪಡಿಸಲು ಕಷ್ಟವಾಗಿರುವುದು ಮೊದಲಾದ ಕಾರಣಗಳು ಕಾರ್ಯಾಚರಣೆಗೆ ಅಡ್ಡಿಯಾಗಿವೆ’ ಎನ್ನುವುದು ಸಮಿತಿಯ ಸದಸ್ಯರು ನೀಡುವ ಸಮಜಾಯಿಷಿ.

2023-25ರ ವರೆಗಿನ ಮೂರು ವರ್ಷಗಳ ಅವಧಿಯಲ್ಲಿ ನಿಯಮ ಉಲ್ಲಂಘನೆಯ 70 ಪ್ರಕರಣಗಳನ್ನು ಪತ್ತೆ ಹಚ್ಚಿರುವ ಸಮಿತಿ ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಅಂಗಡಿಕಾರರಿಗೆ ₹34,700 ದಂಡ ವಿಧಿಸಿದೆ.

‘ಸಮಿತಿ ನೀಡುವ ಶಿಕ್ಷೆ ಕೇವಲ ದಂಡ ಮತ್ತು ಎಚ್ಚರಿಕೆಗಳಿಗೆ ಮಾತ್ರ ಸೀಮಿತವಾಗಿದ್ದು ನಿಯಮ ಉಲ್ಲಂಘನೆ ಮರುಕಳಿಸುತ್ತಿದ್ದರೂ ಈವರೆಗೆ ಯಾರೊಬ್ಬರ ವಿರುದ್ಧವೂ ಪ್ರಕರಣ ದಾಖಲಿಸದಿರುವುದು ಕಾನೂನು ಅನುಷ್ಠಾನವನ್ನು ಗಂಭಿರವಾಗಿ ಪರಿಗಣಿಸದಿರುವುದಕ್ಕೆ ನಿದರ್ಶನ’ ಎಂದು ಹಳದೀಪುರದ ರವಿ ನಾಯ್ಕ ಸಮಿತಿಯ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

‘ತಂಬಾಕು ಉತ್ಪನ್ನಗಳ ಮಾರಾಟ ಪಟ್ಟಣಕ್ಕಿಂತ ಗ್ರಾಮೀಣ ಭಾಗಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಒತ್ತುವರಿ ಮಾಡಿದ ಜಾಗದಲ್ಲಿ ತೆರೆದ ಅಂಗಡಿಗಳಲ್ಲಿ ಗುಟಕಾದಂತಹ ತಂಬಾಕು ಉತ್ಪನ್ನಗಳ ಮಾರಾಟ ನಡೆಯುತ್ತಿದೆ. ಗುಟಕಾ ಪೊಟ್ಟಣ, ತಂಪು ಪಾನೀಯ ಬಾಟಲಿಗಳು, ಇತರ ಪ್ಲಾಸ್ಟಿಕ್ ತ್ಯಾಜ್ಯಗಳು ರಸ್ತೆ, ಚರಂಡಿಗಳಲ್ಲೆಲ್ಲ ಚೆಲ್ಲಾಡುತ್ತಿದ್ದು ಪರಿಸರಕ್ಕೆ ಹಾನಿ ಉಂಟು ಮಾಡುತ್ತಿವೆ’ ಎಂದು ಗುಂಡಿಬೈಲ್‍ನ ಗಜೇಂದ್ರ ನಾಯ್ಕ ಬೇಸರ ವ್ಯಕ್ತಪಡಿಸಿದರು.

ದಾಳಿ ಮಾಡುವ ಸುದ್ದಿ ಗೊತ್ತಾಗುತ್ತಿದ್ದಂತೆ ಪ್ರದರ್ಶನಕ್ಕಿಟ್ಟ ತಂಬಾಕು ಉತ್ಪನ್ನಗಳನ್ನು ಅಡಗಿಸಿಡುತ್ತಾರೆ. ನಿಯಮ ಪಾಲನೆಯಾಗುವಂತೆ ಮಾಡಲು ಸಾರ್ವಜನಿಕ ನಿಗಾ ಕೂಡ ಅಗತ್ಯ ಡಾ.ಚಿದಾನಂದ ತಾಲ್ಲೂಕು ಆರೋಗ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.