ಶಿರಸಿ: ಆರ್ಥಿಕವಾಗಿ ದುರ್ಬಲರಾಗಿರುವ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳ ವೃತ್ತಿಪರ ಉನ್ನತ ವ್ಯಾಸಂಗಕ್ಕೆ ಶಿಕ್ಷಣ ಸಾಲ ನೀಡಲು ನಿರ್ಧರಿಸಲಾಗಿದೆ ಎಂದು ದಿ ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿ (ಟಿ.ಆರ್.ಸಿ.) ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಹೇಳಿದರು.
ಗುರುವಾರ ನಡೆದ ಸಂಸ್ಥೆಯ 108ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ‘ರೈತ ಕುಟುಂಬದ ಮಕ್ಕಳು ಉತ್ತಮ ಸ್ಥಿತಿ ಹೊಂದಲು ಪ್ರೋತ್ಸಾಹಿಸಲಾಗುವುದು. ಬಡ ಕುಟುಂಬದ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗದೇ ಅವರ ಪ್ರತಿಭೆ ಅನಾವರಣಗೊಂಡು ಕುಟುಂಬದ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಲು ಸಹಾಯವಾಗಲು ಈ ಸಾಲ ನೀಡಲು ಉದ್ದೇಶಿಸಲಾಗಿದೆೆ’ ಎಂದರು.
‘ಅಲ್ಪಾವದಿ ಕೃಷಿ ಅಭಿವೃದ್ಧಿ ಸಾಲ, ಕೃಷಿಯೇತರ ಮಾಧ್ಯಮಿಕ ಸಾಲ ಹಾಗೂ ವಾಹನ ಸಾಲಗಳಿಗೆ ಶೇ.1ರಷ್ಟು ಬಡ್ಡಿದರವನ್ನು ಕಡಿಮೆಗೊಳಿಸಲಾಗಿದೆ’ ಎಂದು ತಿಳಿಸಿದರು.
ಸದಸ್ಯರು ವ್ಯವಹಾರದ ಮಾಹಿತಿಯನ್ನು ತಾವಿರುವ ಸ್ಥಳದಿಂದಲೇ ಪಡೆದುಕೊಳ್ಳಲು ಅನುಕೂಲವಾಗುವ ‘ಕೋ-ವ್ಯಾಲೆಟ್’ ತಂತ್ರಾಂಶವನ್ನು ಸಾಂಕೇತಿಕವಾಗಿ ಅನಾವರಣಗೊಳಿಸಲಾಯಿತು.
ಹನ್ನೆರಡು ಹಿರಿಯ ಸದಸ್ಯರಿಗೆ ‘ಉತ್ತಮ ಸದಸ್ಯ’ ಹಾಗೂ ಮೂವರು ಸದಸ್ಯರಿಗೆ ‘ಉತ್ತಮ ಕೃಷಿಕ ಸದಸ್ಯ’ ಎಂದು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಲೋಕೇಶ ಹೆಗಡೆ ಹುಲೇಮಳಗಿ, ಲೆಕ್ಕಪರಿಶೋಧಕ ಆರ್.ಎನ್.ಹೆಗಡೆ ಯಲ್ಲಾಪುರ, ಸಂಸ್ಥೆಯ ನಿರ್ದೇಶಕರು ಇದ್ದರು. ಮುಖ್ಯ ಕಾರ್ಯನಿರ್ವಾಹಕ ರಮೇಶ ಹೆಗಡೆ ಬಾಳೆಗದ್ದೆ, ಕಿರಣ ಭಟ್ ಮಾವಿನಕೊಪ್ಪ ವಾರ್ಷಿಕ ವರದಿ ವಾಚಿಸಿದರು. ಜಿ.ಜಿ.ಹೆಗಡೆ ಕುರುವಣಿಗೆ ನಿರ್ವಹಿಸಿದರು. ಸಂಘದ ನಿರ್ದೇಶಕ ವಿ.ಜಿ. ಹೆಗಡ ಸೋಮ್ನಳ್ಳಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.