
ಕಾರವಾರ: ತುಳಸಿ ಹಬ್ಬದ ಆಚರಣೆಗೆ ಭರದ ಸಿದ್ಧತೆ ಸಾಗಿದ್ದು ಇಲ್ಲಿನ ಮಾರುಕಟ್ಟೆಯಲ್ಲಿ ಅಗತ್ಯ ಸಾಮಗ್ರಿಗಳ ಮಾರಾಟ, ಖರೀದಿ ಜೋರಾಗಿ ನಡೆದಿದೆ.
ಭಾನುವಾರ ತುಳಸಿ ಹಬ್ಬ ನಡೆಯಲಿದ್ದು, ಇದಕ್ಕಾಗಿ ಕಬ್ಬು, ಚೆಂಡು ಹೂವಿನ ಮಾಲೆ, ನೆಲ್ಲಿಕಾಯಿ ಗೊಂಚಲು, ಇತರ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿದೆ.
ಕಳೆದ ಬಾರಿ ಹಬ್ಬದ ವೇಳೆ 10 ರಿಂದ 15 ಕಬ್ಬುಗಳಿರುವ ಹೊರೆಯೊಂದು ಸರಾಸರಿ ₹400 ರಿಂದ ₹450 ದರದಲ್ಲಿ ಮಾರಾಟ ಕಂಡಿತ್ತು. ಈ ಬಾರಿ 10 ಕಬ್ಬುಗಳ ಹೊರೆಗೆ ₹300 ರಿಂದ ₹350 ದರ ನಿಗದಿಪಡಿಸಲಾಗಿದೆ. ಎರಡು ದಿನದಿಂದ ಭರ್ಜರಿ ವ್ಯಾಪಾರ ನಡೆಯುತ್ತಿದೆ.
ಇಲ್ಲಿನ ಎಂ.ಜಿ.ರಸ್ತೆ, ಗ್ರೀನ್ ಸ್ಟ್ರೀಟ್ ಸೇರಿ ವಿವಿಧೆಡೆಗಳಲ್ಲಿ ತುಳಸಿ ಹಬ್ಬದ ಸಾಮಗ್ರಿಗಳ ವಹಿವಾಟು ನಡೆಯುತ್ತಿದೆ. ಕಬ್ಬಿನ ಹೊರೆಯ ಜತೆಗೆ ವರನ ರೂಪದಲ್ಲಿ ಬಳಕೆಯಾಗುವ ಕಟ್ಟಿಗೆ ಕೋಲು, ವೀಳ್ಯದಲೆ ಮುಂತಾದ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಿವೆ. ನೆರೆಯ ಹಾವೇರಿ, ಶಿವಮೊಗ್ಗ ಜಿಲ್ಲೆಗಳಿಂದ ಕಬ್ಬುಗಳನ್ನು ಮಾರಾಟಕ್ಕೆ ತರಲಾಗಿದೆ.
ತುಳಸಿ ಹಬ್ಬಕ್ಕೆ ಮನೆಗಳ ಅಂಗಳದಲ್ಲಿ ತಯಾರಿ ಚುರುಕುಗೊಂಡಿದ್ದು, ತುಳಸಿ ಕಟ್ಟೆಗೆ ಬಣ್ಣ ಬಳಿಯುವ ಜತೆಗೆ ಮಂಟಪಗಳನ್ನು ರಚಿಸುವ ಕೆಲಸ ಭರದಿಂದ ಸಾಗಿದೆ. ಕೆಲವೆಡೆ ಅದ್ದೂರಿ ಮಂಟಪ ರಚಿಸುವ ಪದ್ಧತಿ ಇದ್ದರೆ, ಕಟ್ಟೆಯ ಸುತ್ತಲೂ ಕಬ್ಬುಗಳನ್ನು ಕಟ್ಟಿ ಪೂಜಿಸುವ ಪದ್ಧತಿಯೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.