ADVERTISEMENT

ಗೋಕರ್ಣಕ್ಕೆ ಕೇಂದ್ರ ಸಚಿವ ಗಜೇಂದ್ರಸಿಂಗ್ ಶೇಖಾವತ್ ಭೇಟಿ

​ಪ್ರಜಾವಾಣಿ ವಾರ್ತೆ
Published 21 ಮೇ 2025, 12:49 IST
Last Updated 21 ಮೇ 2025, 12:49 IST
<div class="paragraphs"><p>ಗೋಕರ್ಣದ ಮಹಾಬಲೇಶ್ವರನ ಆತ್ಮಲಿಂಗಕ್ಕೆ ಕೇಂದ್ರ ಸಚಿವ ಗಜೇಂದ್ರಸಿಂಗ್ ಶೇಖಾವತ್ ಪೂಜೆ ಸಲ್ಲಿಸಿದರು</p></div>

ಗೋಕರ್ಣದ ಮಹಾಬಲೇಶ್ವರನ ಆತ್ಮಲಿಂಗಕ್ಕೆ ಕೇಂದ್ರ ಸಚಿವ ಗಜೇಂದ್ರಸಿಂಗ್ ಶೇಖಾವತ್ ಪೂಜೆ ಸಲ್ಲಿಸಿದರು

   

ಗೋಕರ್ಣ: ಕೇಂದ್ರ ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮ ಸಚಿವ ಗಜೇಂದ್ರಸಿಂಗ್ ಶೇಖಾವತ್ ತಮ್ಮ ಪತ್ನಿ ಜೊತೆಯಾಗಿ ಬುಧವಾರ ಗೋಕರ್ಣಕ್ಕೆ ಭೇಟಿಯಿತ್ತು ಮಹಾಗಣಪತಿ, ಮಹಾಬಲೇಶ್ವರನ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿ, ಪಾರ್ವತಿಯ ದರ್ಶನ ಪಡೆದರು.

ಆತ್ಮಲಿಂಗಕ್ಕೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಮತ್ತು ನವಧಾನ್ಯಾಭಿಷೇಕ ಪೂಜೆ ಸಲ್ಲಿಸಿದರು. ವೇ. ಅಮೃತೇಶ ಹಿರೇ ಪೂಜಾಕಾರ್ಯ ನೆರವೇರಿಸಿಕೊಟ್ಟರು. ದೇವಸ್ಥಾನದ ಮೇಲುಸ್ತುವಾರಿ ಸಮಿತಿ ಸದಸ್ಯರಾದ ವೇ. ಪರಮೇಶ್ವರ ಪ್ರಸಾದ ರಮಣಿ, ಮಹೇಶ ಹಿರೇಗಂಗೆ ಮತ್ತು ಸಮಿತಿಯ ಕಾರ್ಯದರ್ಶಿ ಹಾಗೂ ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಪೂಜೆಗೆ ವ್ಯವಸ್ಥೆ ಮಾಡಿಕೊಟ್ಟರು. ನಂತರ ದೇವಸ್ಥಾನದ ವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು.

ADVERTISEMENT

‘ಗೋಕರ್ಣವು ಪ್ರವಾಸೋದ್ಯಮದಲ್ಲಿ ಮಂಚೂಣಿಯಲ್ಲಿರುವ ಕ್ಷೇತ್ರ. ಆದರೆ ಒಳಚರಂಡಿ ಸೇರಿದಂತೆ ಇಲ್ಲಿಯ ಮೂಲಸೌಲಭ್ಯ ಸರಿ ಇಲ್ಲ. ಪ್ರವಾಸೋದ್ಯಮ ಇಲಾಕೆಯ ಎಕರೆಗಟ್ಟಲೆ ಪ್ರದೇಶ ಹಾಳು ಬಿದ್ದಿದೆ’ ಎಂದು ಪತ್ರಕರ್ತರು ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಕಾಶಿ, ಉಜ್ಜಯಿನಿಯಂತೆಯೇ ಗೋಕರ್ಣಬೂ ಅತ್ಯಂತ ಪವಿತ್ರ, ಪುಣ್ಯ ಕ್ಷೇತ್ರ. ಅಲ್ಲಿಯಂತೆಯೇ ಇಲ್ಲಿಯೂ ಅಭಿವೃದ್ಧಿಯಾಗಬೇಕಿದೆ. ಅದಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಬೇಕು. ಗೋಕರ್ಣದ ಅಭಿವೃದ್ಧಿಗೆ ಸಂಪೂರ್ಣ ನೀಲನಕ್ಷೆ ತಯಾರಿಸಿ, ಯೋಜನೆ ರೂಪಿಸಿ ಕೇಂದ್ರಕ್ಕೆ ಕಳುಹಿಸಿದರೆ ಕೇಂದ್ರ ನೆರವು ನೀಡಬಹುದು’ ಎಂದರು.

ಕೆನರಾ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಕುಮಾಟಾ ಶಾಸಕ ದಿನಕರ ಶೆಟ್ಟಿ, ಕಾರವಾರದ ಮಾಜಿ ಶಾಸಕಿ ರೂಪಾಲಿ ನಾಯ್ಕ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ, ಕುಮಟಾ ಮಂಡಲ ಅಧ್ಯಕ್ಷ ಜಿ.ಐ.ಹೆಗಡೆ, ಪ್ರಮುಖರಾದ ಮಂಜುನಾಥ ಜನ್ನು, ಮಹೇಶ ಶೆಟ್ಟಿ, ಗಣೇಶ ಪಂಡಿತ, ಭಾರತಿ ದೇವತೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.