
ಕಾರವಾರ: ಜಿಲ್ಲೆಯಲ್ಲಿ ದಿನ ಕಳೆದಂತೆ ಫಾಸ್ಟ್ಫುಡ್ ಮಳಿಗೆಗಳು, ಹೋಟೆಲ್ಗಳ ಸಂಖ್ಯೆ ಹೆಚ್ಚುತ್ತಿದೆ. ತಿನಿಸುಗಳ ತಯಾರಿಕೆಗೆ ಅಪಾಯಕಾರಿ ರಾಸಾಯನಿಕ ಪದಾರ್ಥಗಳ ಬಳಕೆ ಮಾಡುತ್ತಿರುವ ದೂರುಗಳು ವ್ಯಾಪಕವಾಗಿದೆ. ಆದರೆ, ಅವುಗಳ ನಿಯಂತ್ರಣಕ್ಕೆ ಕಾರ್ಯನಿರ್ವಹಿಸಬೇಕಾದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಕಾರಿ, ಸಿಬ್ಬಂದಿ ಇಲ್ಲದೆ ಖಾಲಿಯಾಗಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿರುವ ಹಳೆಯ ಕಟ್ಟಡವೊಂದರಲ್ಲಿ ಪ್ರಾಧಿಕಾರದ ಕಚೇರಿ ಇದೆ. ಪ್ರಾಧಿಕಾರವನ್ನು ಜಿಲ್ಲೆಯಲ್ಲಿ ಮುನ್ನಡೆಸುವ ಅಂಕಿತಾಧಿಕಾರಿ ಹುದ್ದೆಯೇ ಖಾಲಿ ಉಳಿದಿದೆ. ತಾಲ್ಲೂಕುಗಳಲ್ಲಿ ಇರಬೇಕಾದ ಆಹಾರ ಸುರಕ್ಷತಾಧಿಕಾರಿ ಹುದ್ದೆ ಖಾಲಿ ಇದ್ದು, ಆಯಾ ತಾಲ್ಲೂಕುಗಳ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಈ ಹುದ್ದೆಯ ಜವಾಬ್ದಾರಿಯನ್ನು ಕಳೆದ ಐದು ತಿಂಗಳಿನಿಂದ ವಹಿಸಲಾಗಿದೆ.
‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ಈ ಹಿಂದೆ ಆರೋಗ್ಯ ಇಲಾಖೆಯ ಹಿರಿಯ ವೈದ್ಯಾಧಿಕಾರಿಯೊಬ್ಬರನ್ನು ಅಂಕಿತಾಧಿಕಾರಿಯಾಗಿ ನಿಯೋಜಿಸಲಾಗಿತ್ತು. ಆದರೆ, ಐದು ತಿಂಗಳ ಹಿಂದೆ ಸರ್ಕಾರವೇ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ವಹಿಸಿದ್ದ ಪ್ರಾಧಿಕಾರದ ಜವಾಬ್ದಾರಿಯನ್ನು ಹಿಂಪಡೆದಿದೆ. ಜಿಲ್ಲಾ ಕೇಂದ್ರದ ಉಪವಿಭಾಗಾಧಿಕಾರಿಗೆ ಈ ಜವಾಬ್ದಾರಿ ಹೊರಿಸಲಾಗಿದೆ. ಆಹಾರ ಸುರಕ್ಷತಾಧಿಕಾರಿ ಹುದ್ದೆಯೂ ಖಾಲಿ ಇರುವ ಕಾರಣದಿಂದ ಆಯಾ ತಾಲ್ಲೂಕು ಆರೋಗ್ಯಾಧಿಕಾರಿಗಳೇ ಈ ಹುದ್ದೆ ನಿಭಾಯಿಸಲು ಆದೇಶಿಸಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
‘ಜಿಲ್ಲಾಕೇಂದ್ರದ ಉಪವಿಭಾಗಾಧಿಕಾರಿ ಹುದ್ದೆಯೇ ಇಲ್ಲ. ಕುಮಟಾ ಉಪವಿಭಾಗಾಧಿಕಾರಿ ಅವರಿಗೆ ಹೆಚ್ಚುವರಿ ಪ್ರಭಾರ ನೀಡಲಾಗಿದೆ. ಅವರಿಗೆ ಎರಡು ಉಪವಿಭಾಗಗಳ ಜವಾಬ್ದಾರಿಯ ಜೊತೆಗೆ ಸ್ಥಳೀಯ ಸಂಸ್ಥೆಗಳ ಆಡಳಿತಾಧಿಕಾರಿ, ನೌಕಾನೆಲೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಯನ್ನೂ ನಿಭಾಯಿಸಬೇಕಿದೆ. ಇದರ ನಡುವೆ ಅಂಕಿತಾಧಿಕಾರಿ ಹುದ್ದೆ ನಿಭಾಯಿಸುವುದು ಸವಾಲಿನ ಕೆಲಸ’ ಎಂದೂ ಹೇಳಿದರು.
‘ಆಹಾರ ಸುರಕ್ಷತಾಧಿಕಾರಿ ಹುದ್ದೆ ವಹಿಸಿಕೊಳ್ಳಲು ಕಾರವಾರ, ಭಟ್ಕಳ ಮತ್ತು ಸಿದ್ದಾಪುರದ ತಾಲ್ಲೂಕು ಆರೋಗ್ಯಾಧಿಕಾರಿಗಳು ಹಿಂದೇಟು ಹಾಕಿದ್ದರು. ಸೂಕ್ತ ತರಬೇತಿ ಇಲ್ಲದೆ ಈ ಹುದ್ದೆ ನಿಭಾಯಿಸುವುದು ಕಷ್ಟ ಎಂಬುದು ಅವರ ವಾದವಾಗಿತ್ತು. ಮನವೊಲಿಸಿ ಅವರಿಗೆ ಹುದ್ದೆ ವಹಿಸಿಕೊಳ್ಳಲು ಸೂಚಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಲ್ಲಿ ಅಧಿಕಾರಿಗಳ ಕೊರತೆ ಇದ್ದರೂ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಜವಾಬ್ದಾರಿ ವಹಿಸಿದ್ದರಿಂದ ಅವರು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳನ್ನು ಬಳಸಿಕೊಂಡು ಕೆಲಸ ಮಾಡಲಾಗುತ್ತಿದೆ.– ಶ್ರವಣಕುಮಾರ, ಕಾರವಾರ ಉಪವಿಭಾಗಾಧಿಕಾರಿ
ಪ್ರಾಧಿಕಾರದ ಕೆಲಸ ಏನು?
ಆಹಾರ ವಸ್ತುಗಳಿಗೆ ಕಲಬೆರಕೆ ಮಾಡುವುದನ್ನು ತಡೆಯುವುದು ನಿಷೇಧಿತ ಬಣ್ಣ ರಾಸಾಯನಿಕಗಳ ಬಳಕೆ ಮಾಡುವುದನ್ನು ನಿಯಂತ್ರಿಸುವುದು ಹಾಗೂ ಅವಧಿ ಮೀರಿದ ತಿನಿಸುಗಳ ಮಾರಾಟ ತಡೆ ಸೇರಿದಂತೆ ಸಾರ್ವಜನಿಕರು ಸೇವಿಸುವ ಆಹಾರಗಳ ಸುರಕ್ಷತೆ ಕಾಯವುದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜವಾಬ್ದಾರಿಯಾಗಿದೆ.
ಜೊತೆಗೆ ವಾರ್ಷಿಕ ₹12 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸುವವರು ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ನೋಂದಣಿ ಪ್ರಾಧಿಕಾರದ ಅಧಿಕಾರಿಗಳಲ್ಲಿ ಕಡ್ಡಾಯವಾಗಿ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಂಡು ಪರವಾನಗಿ ಪಡೆಯಬೇಕಾಗುತ್ತದೆ. ಆಹಾರ ಸುರಕ್ಷತೆಯ ಬಗ್ಗೆ ದೂರುಗಳ ಬಂದರೆ ಸ್ಥಳಕ್ಕೆ ತೆರಳಿ ಮಾದರಿ ಪಡೆದು ಅದನ್ನು ಪ್ರಯೋಗಾಲಯಕ್ಕೆ ಕಳಿಸಬೇಕಿದೆ. ಆದರೆ ಅಂಥ ಕಾರ್ಯವನ್ನು ಮಾಡಲು ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳೇ ಇಲ್ಲದಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.