ಮುಂಡಗೋಡ: ಮೂರು ದಶಕಗಳ ಹಿಂದೆ ಚಿಗಳ್ಳಿಯ ಪ್ರೌಢಶಾಲೆ ನಿರ್ಮಾಣಕ್ಕೆ 2.17ಎಕರೆ ಜಾಗವನ್ನು ದಾನವಾಗಿ ನೀಡಿದ್ದ ಉದ್ಯಮಿ ಎಂ.ಸಿ.ಕಲಾಲ ಹಾಗೂ ಅನಿಲ ಕಲಾಲ ಕುಟುಂಬದವರನ್ನು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಈಚೆಗೆ ನಡೆದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಿದರು.
ಚಿಗಳ್ಳಿ ಸರ್ಕಾರಿ ಪ್ರೌಢಶಾಲೆಯು ದೇವಕ್ಕ ಛಾಯಪ್ಪ ಕಲಾಲ ಸರ್ಕಾರಿ ಪ್ರೌಢಶಾಲೆ ಎಂದು ಮರುನಾಮಕರಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಕುಟುಂಬದವರು ಸಂತಸ ವ್ಯಕ್ತಪಡಿಸಿದರು. ಜಾಗ ದಾನ ಮಾಡಿರುವ ಕುಟುಂಬ ಸದಸ್ಯರನ್ನು ಗ್ರಾಮದ ಶಿವಾಜಿ ಸರ್ಕಲ್ನಿಂದ ಪ್ರೌಢಶಾಲೆವರೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಶಾಲಾ ಆವರಣದಲ್ಲಿ ಪುಷ್ಪಾರ್ಚನೆ ಮೂಲಕ ವಿದ್ಯಾರ್ಥಿಗಳು ಸ್ವಾಗತಿಸಿದರು.
ಉದ್ಯಮಿ ಎಂ.ಸಿ.ಕಲಾಲ ಮಾತನಾಡಿ, ‘ಪ್ರೌಢಶಾಲೆಗೆ ತಮ್ಮ ತಾಯಿಯ ಹೆಸರು ಇಟ್ಟಿರುವುದಕ್ಕೆ ಸಂತಸವಾಗಿದೆ. ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಶಾಲಾಭಿವೃದ್ಧಿ ಸಮಿತಿಯವರು ಗ್ರಾಮಸ್ಥರ ಸಹಕಾರದೊಂದಿಗೆ ಯಶಸ್ವಿ ಕಾರ್ಯಕ್ರಮ ನಡೆಸಿಕೊಟ್ಟು, ಸಮಾಜಮುಖಿ ಕೆಲಸ ಮಾಡಲು ಮತ್ತಷ್ಟು ಪ್ರೇರಣೆ ನೀಡಿದ್ದಾರೆʼ ಎಂದರು.
ಪ್ರೌಢಶಾಲೆಯಲ್ಲಿ ಉತ್ತಮ ಕೆಲಸ ಮಾಡಿ ಬೇರೆಡೆ ವರ್ಗಾವಣೆಗೊಂಡಿರುವ ಶಿಕ್ಷಕರು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಲ್.ಟಿ.ಪಾಟೀಲ, ಬಿಇಒ ವಿ.ಎಸ್.ಪಟಗಾರ, ಎಸ್ಡಿಎಮ್ಸಿ ಅಧ್ಯಕ್ಷ ಗಣಪತಿ ಕೀರ್ತೆಪ್ಪನವರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಕ್ಕಮ್ಮ ನಿಂಬಾಯಿ, ಹಳೆಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಗಣೇಶ ವಡ್ಡರ, ಗೋಪಾಲ ಆಲದಕಟ್ಟಿ, ರಮೇಶ ತೆಗ್ಗಳ್ಳಿ, ಜಿ.ಎಸ್.ಕಾತೂರು, ಡಿ.ಎಫ್.ಮಡ್ಲಿ, ಎಂ.ಪಿ.ಕುಸೂರ, ಪ್ರಮೋದ ಸಣ್ಮನಿ ಇದ್ದರು. ಶಿಕ್ಷಕರಾದ ಎನ್.ಎಸ್.ಹೆಗಡೆ ಮತ್ತು ಮಂಜುನಾಥ ಹರಿಜನ ಕಾರ್ಯಕ್ರಮ ನಿರ್ವಹಿಸಿದರು, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಗುರುನಾಥ ಗವಾಣಿಕರ ಸ್ವಾಗತಿಸಿದರು. ನಾರಾಯಣ ಬೆಡಸಗಾಂವ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.