ಜೊಯಿಡಾ: ಜಿಲ್ಲೆಯಲ್ಲಿ ‘ಮಿನಿ ಪಂಡರಪುರ’ ಎಂದೇಪ್ರಸಿದ್ಧವಾಗಿರುವ ತಾಲ್ಲೂಕಿನ ದುಧಗಾಳಿಯಲ್ಲಿಏ.17ರಂದುವಿಠ್ಠಲ ರುಕುಮಾಯಿ ದೇವರ ಜಾತ್ರೆ ನಡೆಯಲಿದೆ. ಇದಕ್ಕೆ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿವೆ.
ಶ್ರೀ ಕ್ಷೇತ್ರದಲ್ಲಿ ರಾಮನವಮಿಯಿಂದಲೇ ಧಾರ್ಮಿಕ ಕಾರ್ಯಗಳು ಆರಂಭಗೊಂಡಿದ್ದು, ನಿತ್ಯವೂ ಪೂಜೆ, ಪುನಸ್ಕಾರಗಳು ನೆರವೇರುತ್ತಿವೆ. ಜಾತ್ರೆಯ ಕೊನೆಯ ದಿನವಾದ ಬುಧವಾರ ಪಂಡರಾಪುರದ ಮಾದರಿಯಲ್ಲೇಧಾರ್ಮಿಕ ಕಾರ್ಯಗಳು ನಡೆಯಲಿವೆ.
ಬೆಳಿಗ್ಗೆ ದೇವರ ಪೂಜೆ ಹರಿಪಾಠ, ಮಧ್ಯಾಹ್ನ ವಿಠ್ಠಲ ರುಕುಮಾಯಿ ದೇವರನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಭಕ್ತಿಗೀತೆ,ಭಜನೆ ಹಾಡುಗಳೊಂದಿಗೆ ವನವಿಹಾರಕ್ಕೆ ಕರೆದುಕೊಂಡು ಹೋಗುವ ಪದ್ಧತಿಯ ಆಚರಣೆಯಿದೆ. ದೇವಸ್ಥಾನದಿಂದ ಸುಮಾರುಎರಡುಕಿ.ಮೀ ದೂರದ ಕಾಡಿನಲ್ಲಿದೇವರ ಕೆರೆಯಿದೆ. ಅಲ್ಲಿ ವಿಠ್ಠಲ ರುಕುಮಾಯಿ ದೇವರ ಮೂರ್ತಿಗೆ ಸ್ನಾನ ಮಾಡಿಸಲಾಗುತ್ತದೆ. ಬಳಿಕ ಎಲ್ಲಾ ಭಕ್ತರು ಅದೇಕೆರೆಯ ನೀರಿನಿಂದ ಸ್ನಾನ ಮಾಡುತ್ತಾರೆ.
ದೇವರಿಗೆ ನೈವೇದ್ಯ ಸಮರ್ಪಿಸಿ ಪುನಃ ಪಲ್ಲಕ್ಕಿಯಲ್ಲಿ ಕೂರಿಸಿ ದೇವಸ್ಥಾನದ ಎದುರಿಗೆ ಬಂದು ಅಗ್ನಿಕುಂಡ ಪ್ರವೇಶ ಮಾಡಲಾಗುತ್ತದೆ. ನಂತರ ಭಕ್ತರು ದೇವರ ದರ್ಶನಪಡೆಯುತ್ತಾರೆ.
ಕೆಂಡ ಹಾಯುವ ಪದ್ಧತಿ:ತಾಲ್ಲೂಕಿನಲ್ಲಿ ಮತ್ತೆಲ್ಲಿಯೂ ಇಲ್ಲದ ಅಗ್ನಿಕುಂಡವನ್ನು ದಾಟುವ ವಿಶೇಷ ಪದ್ಧತಿ ದುಧಗಾಳಿ ಕ್ಷೇತ್ರದಲ್ಲಿದೆ. ಎರಡು ದಿನ ಉಪವಾಸ ನಿರತ ಭಕ್ತರು, ಗರ್ಭಗುಡಿಯ ಎದುರಿನಲ್ಲಿ ನಿರ್ಮಿಸಿರುವ ಬೆಂಕಿಕೊಂಡದ ರಾಶಿಯಲ್ಲಿ ಹಾದುಹೋಗುತ್ತಾರೆ. ಜಾತ್ರೆಗೆ ತಾಲ್ಲೂಕಿನ ವಿವಿಧ ಗ್ರಾಮಗಳ ಭಕ್ತರ ಜೊತೆಗೆ,ಹಳಿಯಾಳ ಹಾಗೂ ಕಾರವಾರ ತಾಲ್ಲೂಕುಗಳಿಂದ, ಗೋವಾ, ಮಹಾರಾಷ್ಟ್ರ ಭಾಗದಿಂದಅಪಾರ ಭಕ್ತರು ಬರುತ್ತಾರೆ. ಭಕ್ತರಿಗೆ ಅನ್ನಸಂತರ್ಪಣೆ, ರಾತ್ರಿ ‘ಕಾಮಾ ಪುರತೋ ಮಾಮಾ’ ಎಂಬ ಕೊಂಕಣಿ ನಾಟಕದ ಪ್ರದರ್ಶನವೂ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.