ಕಾರವಾರ:ನಗರೋತ್ಥಾನ ಯೋಜನೆಯ ಮೂರನೇ ಹಂತದ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಿಲ್ಲ.ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ನಂದನಗದ್ದಾದ ಸಕ್ರವಾಡ ಹಾಗೂ ಸುತ್ತಮುತ್ತಲಿನ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
‘ನಗರಸಭೆಯ ವಾರ್ಡ್ ನಂಬರ್ 26ರಲ್ಲಿ ಸಕ್ರವಾಡದಿಂದ ಒಳಭಾಗಕ್ಕೆ ಸಾಗುವ ರಸ್ತೆಗೆ ಮೂರು ತಿಂಗಳ ಹಿಂದೆ ಜಲ್ಲಿಕಲ್ಲು ಹಾಕಿ ಬಿಡಲಾಗಿದೆ. ಇದರ ಕಾಮಗಾರಿ ಪ್ರಗತಿಯಾಗಿಲ್ಲ. ಈ ರಸ್ತೆಯಿಂದ ಮಳೆ ನೀರು ಮುಖ್ಯರಸ್ತೆಯ ಮೂಲಕ ಹರಿದು ಹಳ್ಳ ಸೇರುತ್ತಿತ್ತು. ಆದರೆ,ಮುಖ್ಯರಸ್ತೆಗೆ ಡಾಂಬರು ಮಾಡಿ ಎತ್ತರಿಸಲಾಗಿದೆ.ಹಾಗಾಗಿಮಳೆಗಾಲದಲ್ಲಿ ನೀರು ಅಕ್ಕಪಕ್ಕದ ಮನೆಗಳಿಗೆ ನುಗ್ಗುವ ಆತಂಕವಿದೆ. ಉಪಕಾರ ಮಾಡುವ ಬದಲು ತೊಂದರೆ ಮಾಡಲಾಗಿದೆ. ಹಾಗಾಗಿ ಚುನಾವಣೆ ಬಹಿಷ್ಕರಿಸಲಿದ್ದೇವೆ’ ಎಂದು ನಗರಸಭೆ ಸದಸ್ಯ ನಂದಾ ನಾಯ್ಕ ಎಚ್ಚರಿಕೆ ನೀಡಿದ್ದಾರೆ.
ಪಟೇಲ್ ವಾಡಾ, ವಿಶ್ರಾಂತಿ ಕಟ್ಟಾ, ಗಿಂಡಿವಾಡದವರೆಗೆ ಸುಮಾರು ಎರಡು ಕಿ.ಮೀ ಉದ್ದದ ಈ ರಸ್ತೆಯಲ್ಲಿ300ಕ್ಕೂ ಅಧಿಕ ಮನೆಗಳಿವೆ.ಕೋಟೇಶ್ವರದಲ್ಲಿ ಅಂಗನವಾಡಿಯೂ ಇದೆ. ಇಲ್ಲಿ ಕಾಮಗಾರಿ ಪೂರ್ಣಗೊಳಿಸಲೇಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಎಂ.ಡಿ.ನಾಯ್ಕ,ಸುರೇಶ್ ವಿ ನಾಯ್ಕ, ಶ್ರೀಪಾದ ನಾಯ್ಕ, ಸುದೇಶ ಎಂ ನಾಯ್ಕ, ಸುಧೀರ್ ಬಾಂದೇಕರ್, ಲಕ್ಷ್ಮೀಕಾಂತ್ ತಳೇಕರ್, ಸೂರ್ಯಕಾಂತ್ ಟಿ.ನಾಯ್ಕ, ಅರುಣ್ ನಾಯ್ಕ, ಪ್ರಕಾಶ್ ಕೊಚ್ರೇಕರ್, ಶೈಲೇಶ್ ನಾಯ್ಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.