
ಕಾರವಾರ: ‘ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಸರ್ಕಾರದಷ್ಟೆ ಜವಾಬ್ದಾರಿಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನಿಭಾಯಿಸಿದೆ. ಲಕ್ಷಾಂತರ ಕುಟುಂಬಗಳಿಗೆ ಸ್ವಾವಲಂಬಿ ಬದುಕಿಗೆ ದಾರಿ ಮಾಡಿಕೊಟ್ಟಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಇಲ್ಲಿನ ಮಹಾದೇವ ದೇವಸ್ಥಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಗ್ರಾಮಗಳಲ್ಲಿ ಬದಲಾವಣೆ, ಜನರಲ್ಲಿ ಸಾಮಾಜಿಕ ಶಿಸ್ತು ಆರ್ಥಿಕ ಶಿಸ್ತು ಮಹಿಳೆಯ ಸ್ವಾತಂತ್ರ್ಯತ್ವವನ್ನು ಗ್ರಾಮಾಭಿವೃದ್ಧಿ ಯೋಜನೆ ಸಾಕಾರಗೊಳಿಸಿದೆ. ಅದರ ಜೊತೆಗೆ ಮಹಿಳೆಯರಿಗೆ ಉತ್ತಮ ಸಂಸ್ಕಾರ ಕಲಿಸಿದೆ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಹಾದೇವ ದೇವಸ್ಥಾನದ ಪ್ರಧಾನ ಅರ್ಚಕ ಘನಶ್ಯಾಮ ಜೋಶಿ, ‘ಧಾರ್ಮಿಕ ನಂಬಿಕೆ ಉಳಿಸಿಕೊಳ್ಳುವ ಜೊತೆಗೆ ಜೀವನದಲ್ಲಿ ಏಳ್ಗೆ ಸಾಧಿಸಲು ಆರ್ಥಿಕ ಶಿಸ್ತು ಮುಖ್ಯ’ ಎಂದರು.
ರೋಷನಿ ಮಾಳ್ಸೇಕರ್ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಸಭೆಗೆ ಮುನ್ನ ದೇವಸ್ಥಾನದಲ್ಲಿ ಸಾಮೂಹಿಕ ಸಹಸ್ರ ಬಿಲ್ವಾರ್ಚನೆ, ಮೃತ್ಯುಂಜಯ ಹೋಮ ಪೂಜೆ ನಡೆದವು.
ನಿವೃತ್ತ ಅಧಿಕಾರಿಗಳಾದ ಸತೀಶ್ ಗೋಸಾವಿ, ರಾಜೇಂದ್ರ, ಅರ್ಚಕ ರಾಮಕೃಷ್ಣ ಗಾಯಿತ್ರಿ ಭಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಾರವಾರ ಯೋಜನಾಧಿಕಾರಿ ಶಿವರಾಜ್ ಆಚಾರ್ಯ, ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.