ಯಲ್ಲಾಪುರ: ಉದ್ಯಮಿ ಹನುಮಂತ ಎಮ್.ಪೈ (ಪುತ್ತು ಪೈ) (67) ಸೋಮವಾರ ರಾತ್ರಿ ನಿಧನರಾದರು.
ತಾಲ್ಲೂಕಿನ ಕಿರವತ್ತಿಯಲ್ಲಿರುವ ಶ್ರೀಕೃಷ್ಣ ಮಿಲ್ಕ್ ಕ್ಷೀರೋದ್ಯಮ ಸಂಸ್ಥೆಯ ಸಂಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಭಟ್ಕಳದವರಾದ ಅವರು 1989ರಲ್ಲಿ ಕಿರವತ್ತಿಯ ಹೊಸಳ್ಳಿಯಲ್ಲಿ ಕೇವಲ 500 ಲೀಟರ್ ಹಾಲಿನ ವ್ಯವಹಾರದೊಂದಿಗೆ ಕ್ಷೀರ ಉದ್ಯಮ ಆರಂಭಿಸಿದ್ದರು. ಅದು ಈಗ ಬೃಹದಾಕಾರವಾಗಿ ಬೆಳೆದು ನೂರಾರು ಜನರಿಗೆ ಪ್ರತ್ಯಕ್ಷವಾಗಿ, ಸಾವಿರಾರು ಜನರಿಗೆ ಪರೋಕ್ಷವಾಗಿ ಉದ್ಯೋಗ ಕಲ್ಪಿಸುತ್ತಿದೆ.
ಉದ್ಯಮದ ಜೊತೆ ಜೊತೆಯಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಕಿರವತ್ತಿ ಮಾತ್ರವಲ್ಲದೇ ರಾಜ್ಯದ ವಿವಿಧೆಡೆಗಳಲ್ಲಿ ತಮ್ಮ ಉದ್ಯಮದ ಘಟಕಗಳನ್ನು ಸ್ಥಾಪಿಸಿದ್ದರು. ಹಾಲಿನ ಉತ್ಪನ್ನ ಮಾತ್ರವಲ್ಲದೇ ಐಸ್ ಕ್ರೀಮ್, ಸಿಹಿ ಉತ್ಪನ್ನಗಳ ತಯಾರಿಕೆಯನ್ನೂ ಆರಂಭಿಸಿದ್ದರು .
ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. ಸಚಿವ ಶಿವರಾಮ ಹೆಬ್ಬಾರ್ ಕಿರವತ್ತಿಗೆ ತೆರಳಿ ಮೃತರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.