ಯಲ್ಲಾಪುರ: ಇಲ್ಲಿನ ಪಟ್ಟಣ ಪಂಚಾಯಿತಿಯ ಕಂದಾಯ ಅಥವಾ ಯಾವುದೇ ವಿಭಾಗದಲ್ಲಿ ಗ್ರಾಮದೇವಿ ಜಾತ್ರೆಯ ಲೆಕ್ಕಾಚಾರಕ್ಕೆ ಸಂಬಂಧಿಸಿದ ದಾಖಲೆ ಇಲ್ಲ ಎಂದು ಬುಧವಾರ ಪಟ್ಟಣ ಪಂಚಾಯಿತಿಯಲ್ಲಿ ನಡೆದ 2024-25ನೇ ಸಾಲಿನಲ್ಲಿ ಸರ್ಕಾರದಿಂದ ಬಂದ ಅನುದಾನದ ಕ್ರಿಯಾಯೋಜನೆ ತಯಾರಿಸಲು ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು ಜಾರಿಕೊಂಡರು. ಇದು ಸಭೆಯಲ್ಲಿ ವ್ಯಾಪಕ ಗೊಂದಲಕ್ಕೆ ಕಾರಣವಾಯಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನರ್ಮದಾ ನಾಯ್ಕ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪ್ರತಿ ಸಭೆಯಲ್ಲೂ ಜಾತ್ರೆಯ ಲೆಕ್ಕಾಚಾರ ಕೇಳಿ ಕೇಳಿ ಬೇಸತ್ತಿದ್ದ ರಾಧಾಕೃಷ್ಣ ನಾಯ್ಕ, ಸುನಂದಾ ದಾಸ್, ಸತೀಶ ನಾಯ್ಕ, `ಜಾತ್ರೆಯ ಲೆಕ್ಕಾಚಾರದಲ್ಲಿ ₹ 12 ಲಕ್ಷ ಅಪರಾ ತಪರಾ ಆದ ಬಗ್ಗೆ ಕಳೆದ ಸಭೆಯಲ್ಲಿ ತನಿಖೆಗೆ ಠರಾವು ಮಾಡಲಾಗಿದೆ. ಈಗ ಸಾಮನ್ಯ ಸಭೆ ನಡೆಸದೆ ವಿಶೇಷ ಸಾಮಾನ್ಯ ಸಭೆ ನಡೆಸುತ್ತಿರುವುದು, ದಾಖಲೆ ಕಾಣೆಯಾಗಿದೆ ಎಂದು ಜಾರಿಕೊಳ್ಳುತ್ತಿರುವುದು ಜಾತ್ರೆ ಲೆಕ್ಕಾಚಾರದಲ್ಲಿ ಅವ್ಯವಹಾರ ನಡೆದಿರುವುದನ್ನು ದೃಢಪಡಿಸುತ್ತದೆ. ಠರಾವು ಪ್ರತಿ ಪಡೆದು ಲೋಕಾಯುತ್ತ ತನಿಖೆಗೆ ಆಗ್ರಹಿಸುತ್ತೇವೆ' ಎಂದರು.
ಒಂದೇ ವಿಷಯದ ಬಗ್ಗೆ ಚರ್ಚಿಸಲು ಸಭೆ ಕರೆದ ಬಗ್ಗೆ ಸದಸ್ಯರಾದ ರಾಧಾಕೃಷ್ಣ ನಾಯ್ಕ, ಸತೀಶ ನಾಯ್ಕ, ಸೋಮೇಶ್ವರ ನಾಯ್ಕ ಆಕ್ಷೇಪಿಸಿದರು. ಗ್ರಾಮದೇವಿ ಜಾತ್ರೆಯ ಲೆಕ್ಕಾಚಾರದ ಕುರಿತು ಮಾರ್ಚ್ 19 ರಂದು ನಡೆದ ಸಭೆಯಲ್ಲಿ ತನಿಖೆಗೆ ಠರಾವು ಮಾಡಿದ್ದು ಆ ಠರಾವು ಪ್ರತಿ ನೀಡಿ ಸಭೆ ಮುಂದುವರಿಸಬೇಕು ಎಂದು ಅವರು ಆಗ್ರಹಿಸಿದರು.
`ಎರಡು ವರ್ಷಗಳಿಂದ ಜಾತ್ರೆಯ ಲೆಕ್ಕಾಚಾರ ನೀಡುವಂತೆ ಒತ್ತಾಯಿಸುತ್ತಿದ್ದೇವೆ. ಈಗ ದಾಖಲೆ ಕಳೆದಿದೆ ಎಂದು ಅಧಿಕಾರಿಗಳು ಹೇಳುತ್ತಿರುವುದು ಆಶ್ಚರ್ಯ ತಂದಿದೆ. ಅಧಿಕಾರಿಗಳೂ ಇದರಲ್ಲಿ ಹಣ ನುಂಗಿರುವುದು ಖಚಿತ. ಈ ಬಗ್ಗೆ ಲೊಕಾಯುಕ್ತದಲ್ಲಿ ದೂರು ದಾಖಲಿಸುತ್ತೇನೆ ಎಂದು ಸತೀಶ ಶಿವಾನಂದ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.