ADVERTISEMENT

ಆಸ್ತಿ ವಿವಾದ: ಅಣ್ಣನಿಗೆ ಚಾಕು ಇರಿದ ತಮ್ಮ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2022, 9:27 IST
Last Updated 14 ಅಕ್ಟೋಬರ್ 2022, 9:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹುಬ್ಬಳ್ಳಿ: ಆಸ್ತಿ ವಿಷಯಕ್ಕೆ ಸಂಬಂಧಿಸಿ ತಮ್ಮನೇ ಅಣ್ಣನಿಗೆ ಚಾಕು ಇರಿದು ಹತ್ಯೆಗೆ ಯತ್ನಿಸಿದ ಪ್ರಕರಣ ಇಲ್ಲಿನ ಗಾಮನಗಟ್ಟಿಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ತಮ್ಮ ಬಸವನಗೌಡ ಸಿದ್ದಾಪುರ, ಅಣ್ಣ ಕಲ್ಲನಗೌಡ ಸಿದ್ದಾಪುರ ಅವರಿಗೆ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಕಲ್ಲನಗೌಡ ಅವರನ್ನು ಕಿಮ್ಸ್'ಗೆ ದಾಖಲಿಸಲಾಗಿದೆ. ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸನಗೌಡ ಮತ್ತು ಕಲ್ಲನಗೌಡ ಅವರ ನಡುವೆ ಆಸ್ತಿ ವಿಷಯವಾಗಿ ಆಗಾಗ ಜಗಳ ನಡೆಯುತ್ತಿತ್ತು. ಗುರುವಾರ ರಾತ್ರಿ ಬಸನಗೌಡ, ಕಲ್ಲನಗೌಡ ಅವರ ಮನೆಗೆ ನುಗ್ಗಿ ಜಗಳ ತೆಗೆದಿದ್ದಾನೆ. ಅವಾಚ್ಯವಾಗಿ ಬೈದು ಬಲಗಡೆ ಹೊಟ್ಟೆ ಭಾಗಕ್ಕೆ ಮತ್ತು ಕೈಗೆ ಚಾಕುವಿನಿಂದ ಇರಿದಿದ್ದಾನೆ ಎಂದು‌ ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

'ಅಣ್ಣ(ಬಸನಗೌಡ)ನ ಪಾಲಿಗೆ ಬರಬೇಕಾದ ಆಸ್ತಿಯನ್ನು ಈಗಾಗಲೇ ನೀಡಲಾಗಿದೆ. ಅವನಿಗೆ ಮನೆಯನ್ನು ಸಹ ಕಟ್ಟಿಸಿಕೊಟ್ಟಿದ್ದೇವೆ. ಆದರೂ ನಾವಿದ್ದ ಜಾಗವೇ ಬೇಕು ಎಂದು ಜಗಳ ಮಾಡುತ್ತಿದ್ದ. ನಿನ್ನೆ ರಾತ್ರಿ ನಾಲ್ಕು-ಐದು ಮಂದಿ ಜೊತೆಗೆ ಬಂದು, ಕಣ್ಣಿಗೆ ಖಾರಾದ ಪುಡಿ ಎರಚಿ ಚಾಕು ಇರಿದಿದ್ದಾನೆ. ವೈದ್ಯರು ಪರಿಸ್ಥಿತಿ ಗಂಭೀರವಿದ್ದು, ಎರಡು ದಿನ ನಿಗಾದಲ್ಲಿ ಇಡಬೇಕು ಎಂದಿದ್ದಾರೆ' ಎಂದು ಸಹೋದರ ಶಂಕರಗೌಡ ಮಾಧ್ಯಮದವರಿಗೆ ಹೇಳಿದರು.

'ಆಸ್ತಿ ಕುರಿತು ಮೈದುನ(ಬಸನಗೌಡ) ಆಗಾಗ ಬಂದು ಜಗಳ ಮಾಡುತ್ತಿದ್ದ. ಈ ಹಿಂದೆ ನಡೆದ ಜಗಳದಲ್ಲಿ ಮನೆಯವರು(ಗಂಡ) ನಾಪತ್ತೆಯಾಗಿ, ಐದಾರು ದಿನದ ಬಳಿಕ ಪತ್ತೆಯಾಗಿದ್ದರು' ಎಂದು ಪತ್ನಿ ಕಾವೇರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.