ADVERTISEMENT

ಮತದಾನ ಜಾಗೃತಿಗೆ ಪಾಲಕರಿಗೆ ಪತ್ರ: ವಿದ್ಯಾರ್ಥಿಗಳ ಪ್ರಶಂಸೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 15:47 IST
Last Updated 20 ಮಾರ್ಚ್ 2023, 15:47 IST
ಮತದಾನ ಮಾಡುವಂತೆ ಜಾಗೃತಿ ಮೂಡಿಸಲು ಪಾಲಕರಿಗೆ ಪತ್ರ ಬರೆದ ವಿದ್ಯಾರ್ಥಿಗಳನ್ನು ಜಿಲ್ಲಾ ಪಂಚಾಯ್ತಿ ಸಿಇಒ ಈಶ್ವರ ಕಾಂದೂ ಅಭಿನಂದಿಸಿದರು
ಮತದಾನ ಮಾಡುವಂತೆ ಜಾಗೃತಿ ಮೂಡಿಸಲು ಪಾಲಕರಿಗೆ ಪತ್ರ ಬರೆದ ವಿದ್ಯಾರ್ಥಿಗಳನ್ನು ಜಿಲ್ಲಾ ಪಂಚಾಯ್ತಿ ಸಿಇಒ ಈಶ್ವರ ಕಾಂದೂ ಅಭಿನಂದಿಸಿದರು   

ಕಾರವಾರ: ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಿಷ್ಪಕ್ಷಪಾತ, ಕಡ್ಡಾಯವಾಗಿ ಮತದಾನ ಮಾಡುವಂತೆ ತಮ್ಮ ಪಾಲಕರಿಗೆ ಪತ್ರ ಬರೆದಿರುವ ಜಿಲ್ಲೆಯ ವಿವಿಧ ವಸತಿ ಶಾಲೆಗಳ ವಿದ್ಯಾರ್ಥಿಗಳ ಕಾರ್ಯ ಮಾದರಿ ಹಾಗೂ ಶ್ಲಾಘನೆಗೆ ಅರ್ಹ’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಈಶ್ವರ ಕಾಂದೂ ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಅಧೀನದ ಜಿಲ್ಲೆಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ, ಡಾ.ಬಿ.ಆರ್. ಅಂಬೇಡ್ಕರ್, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಸುಮಾರು 6250ಕ್ಕೂ ಅಧಿಕ ಮಕ್ಕಳು ಕಡ್ಡಾಯ, ನಿಷ್ಪಕ್ಷಪಾತ ಹಾಗೂ ಪಾರದರ್ಶಕತೆಯಿಂದ ಮತದಾನ ಮಾಡುವಂತೆ ತಮ್ಮ ಪಾಲಕರಿಗೆ ಮನವಿ ಪತ್ರ ಬರೆದಿದ್ದಾರೆ.

ಅಂತಹ ಮಕ್ಕಳಿಗೆ ಸಿಇಒ ಕಚೇರಿಯಲ್ಲಿ ಸೋಮವಾರ ಅಭಿನಂದಿಸಿದ ಈಶ್ವರ ಕಾಂದೂ, ‘ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ವಿನೂತನ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದರ ಭಾಗವಾಗಿ ಈಗಾಗಲೇ ಜಿಲ್ಲಾ ಪಂಚಾಯತಿಯಿಂದ ಸ್ವೀಪ್ ಚಟುವಟಿಕೆಗಳಡಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಪಾಲಕರಿಗೆ ಪತ್ರ ಬರೆದು ಜಾಗೃತಿ ಮೂಡಿಸಿದ್ದು ಪರಿಣಾಮಕಾರಿ ಕಾರ್ಯ’ ಎಂದರು.

ADVERTISEMENT

‘ಪಾಲಕರಿಗೆ ಮತದಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ಮಕ್ಕಳು ಕೈಗೊಂಡಿರುವ ಮತದಾನ ಜಾಗೃತಿ ಪತ್ರ ಅಭಿಯಾನದ ಜವಾಬ್ದಾರಿಯನ್ನು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಅಜ್ಜಪ್ಪ ಸೊಗಲದ ಹಾಗೂ ಸಂಬಂಧಿಸಿದ ವಸತಿ ಶಾಲೆಯ ಪ್ರಾಚಾರ್ಯರಿಗೆ ವಹಿಸಲಾಗಿದೆ’ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ಶಿಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.