ಹೊಸಪೇಟೆ (ವಿಜಯನಗರ): ಸತತ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೇ ವಿಘ್ನ ನಿವಾರಕನ ಉತ್ಸವಕ್ಕೆ ಮಂಗಳವಾರ ನಗರದಲ್ಲಿ ಕೊನೆಯ ಹಂತದ ಸಿದ್ಧತೆ ನಡೆಯಿತು.
ಆಯಾ ಗಣೇಶ ಮಂಡಳಿಯವರು ನಗರದ ವಿವಿಧ ಬಡಾವಣೆಗಳಲ್ಲಿ ಪೆಂಡಾಲ್ ಹಾಕಿ, ದಾರಿಯುದ್ದಕ್ಕೂ ವಿದ್ಯುತ್ ದೀಪಗಳ ಅಲಂಕಾರ ಮಾಡಿದರು. ಆಗಾಗ್ಗೆ ಮಳೆ ಬಂದು ಅವರ ಕೆಲಸಕ್ಕೆ ಅಡ್ಡಿಪಡಿಸಿದರೂ ಅದನ್ನು ಲೆಕ್ಕಿಸದೇ ಸಿದ್ಧತೆ ಕೆಲಸ ಪೂರ್ಣಗೊಳಿಸಿದರು. ಬಹುತೇಕ ಬಡಾವಣೆಗಳಲ್ಲಿ ಸಿದ್ಧತೆ ಪೂರ್ಣಗೊಂಡಿದ್ದು, ಬುಧವಾರ (ಆ.31) ಗಣಪನ ಪ್ರತಿಷ್ಠಾಪನೆಗೆ ವೇದಿಕೆ ಸಜ್ಜುಗೊಂಡಿದೆ.
ಗೌರಿ–ಗಣೇಶ ಹಬ್ಬಕ್ಕೆ ಪೂಜಾ ವಸ್ತುಗಳ ಖರೀದಿಗೆ ಜನ ಮಂಗಳವಾರ ಬೆಳಿಗ್ಗೆ ಮಾರುಕಟ್ಟೆಗೆ ಬರಬೇಕಿತ್ತು. ಆದರೆ, ವರುಣನ ಆರ್ಭಟದಿಂದ ಅವರ ಲೆಕ್ಕಾಚಾರವೆಲ್ಲ ತಲೆಕೆಳಗಾಯಿತು. ಸಂಜೆಯೂ ಕೆಲಹೊತ್ತು ಮಳೆ ತನ್ನ ಪ್ರತಾಪ ತೋರಿಸಿತು. ಆದರೆ, ಹಬ್ಬದ ಸಂಭ್ರಮ ಜನರನ್ನು ಕುಂದಿಸಲಿಲ್ಲ. ಜನ ಕೊಡೆಗಳನ್ನು ಹಿಡಿದುಕೊಂಡು ಹೊರಗೆ ಬಂದು, ಗಣಪನ ಮೂರ್ತಿ, ಪೂಜಾ ಸಾಮಗ್ರಿಗಳನ್ನು ಖರೀದಿಸಿದರು.ಜಿಲ್ಲಾಡಳಿತವು ಆ. 31ರಿಂದ ಸೆ. 10ರ ವರೆಗೆ ಮದ್ಯ ಮಾರಾಟ, ಸಾಗಾಟ ನಿಷೇಧಿಸಿ ಆದೇಶಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.