ADVERTISEMENT

ವಿಜಯನಗರ: ಬಾಪು ತಂಗಿದ್ದ ಕೊಠಡಿ ಈಗ ಸ್ಮಾರಕ

ವಿಶ್ವನಾಥ ಡಿ.
Published 14 ಆಗಸ್ಟ್ 2022, 19:30 IST
Last Updated 14 ಆಗಸ್ಟ್ 2022, 19:30 IST
ಮಹಾತ್ಮ ಗಾಂಧೀಜಿ ತಂಗಿದ್ದ ಕೊಠಡಿಯಲ್ಲಿ ಅವರ ಏಕಶಿಲೆ ಪುತ್ಥಳಿ ಸ್ಥಾಪಿಸಿರುವುದು
ಮಹಾತ್ಮ ಗಾಂಧೀಜಿ ತಂಗಿದ್ದ ಕೊಠಡಿಯಲ್ಲಿ ಅವರ ಏಕಶಿಲೆ ಪುತ್ಥಳಿ ಸ್ಥಾಪಿಸಿರುವುದು   

ಹರಪನಹಳ್ಳಿ (ವಿಜಯನಗರ ಜಿಲ್ಲೆ): ಮಹಾತ್ಮ ಗಾಂಧೀಜಿ ಅವರು ತಂಗಿದ್ದ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಕೊಠಡಿ ಈಗ ಸ್ಮಾರಕವಾಗಿ ಬದಲಾಗಿದೆ.

ಹರಿಜನೋದ್ಧಾರ ಕಲ್ಯಾಣಕ್ಕೆ ನಿಧಿ ಸಂಗ್ರಹಿಸಲು 1934ರ ಏಪ್ರಿಲ್ ನಲ್ಲಿ ಬಾಪು ಇಲ್ಲಿನ ಕಾಲೇಜಿಗೆ ಭೇಟಿ ನೀಡಿದ್ದರು. ಗಾಂಧೀಜಿ ವಾಸ್ತವ್ಯ ಹೂಡಿದ್ದ ಕೊಠಡಿಗೆ ‘ಗಾಂಧಿ ಮೆಮೋರಿಯಲ್ ಹಾಲ್’ ಎಂದೇ ಕರೆಯಲಾಗುತ್ತದೆ. ಅವರೊಟ್ಟಿಗೆ ಗಂಗಾಧರ ರಾವ್ ದೇಶಪಾಂಡೆ, ಠಕ್ಕರಬಾಪಾ ಕೂಡ ಇದ್ದರು.

ಗಾಂಧಿ ವಾಸವಿದ್ದ ಕೊಠಡಿಯನ್ನು ಜನ ಭಕ್ತಿಭಾವ, ಗೌರವದಿಂದ ಕಾಣುತ್ತಾರೆ. ಯಾರೇ ಒಳ ಹೋಗಬೇಕಾದರೆ ಚಪ್ಪಲಿ ಬಿಟ್ಟು, ಪಾದಗಳನ್ನು ಸ್ವಚ್ಛ ಮಾಡಿಕೊಂಡು ಹೋಗುತ್ತಾರೆ. ಗಾಂಧೀಜಿ ಅವರಿಂದ ಪ್ರಭಾವಿತರಾಗಿ ಸ್ಥಳೀಯ
ಇಜಾರಿ ಶಿರಸಪ್ಪ, ಇಜಾರಿ ಬೊಮ್ಮವ್ವ, ಇಜಾರಿ ಕಮಲಮ್ಮ ಸೇರಿದಂತೆ ಅನೇಕರು ಸ್ವಾತಂತ್ರ್ಯ ಸಂಗ್ರಾಮಕ್ಕೆ ದುಮುಕಿದ್ದನ್ನು ಜನ ಈಗಲೂ ನೆನೆಯುತ್ತಾರೆ.

ADVERTISEMENT

ಬ್ರಿಟಿಷರ ಕಾಲದ ಕಟ್ಟಡವಾಗಿದ್ದರಿಂದ ಅದರ ಮೂಲಕ್ಕೆ ಧಕ್ಕೆ ಬಾರದಂತೆ ಅಭಿವೃದ್ಧಿ ಪಡಿಸಲಾಗಿದೆ. ಮಾಜಿಶಾಸಕ ದಿವಂಗತ ಎಂ.ಪಿ.ರವೀಂದ್ರ ಅವರು ₹30 ಲಕ್ಷ ಅನುದಾನದಲ್ಲಿ ಮೂರು ಅಡಿ ಎತ್ತರದ ಏಕಶಿಲೆ ಗಾಂಧೀಜಿ ಪುತ್ಥಳಿ ಸ್ಥಾಪಿಸಲಾಗಿದೆ. ಅವರ ಹೋರಾಟದ ಹೆಜ್ಜೆ ಗುರುತು ತೋರಿಸುವ ಚಿತ್ರಗಳನ್ನು ಗೋಡೆಗೆ ಅಳವಡಿಸಲಾಗಿದೆ.

ಹೆಜ್ಜೆ ಗುರುತು:

1930ರಲ್ಲಿ ಮಧ್ಯಪಾನ ನಿಷೇಧ ಚಳವಳಿ ಅಂಗವಾಗಿ ವಸುಪಾಲಪ್ಪ, ಟಿ.ಬಿ.ಕೇಶವರಾಯ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಅನೇಕರು ಪಾಲ್ಗೊಂಡಿದ್ದರು. ಕಂಚಿಕೇರಿ, ಕಣಿವಿಹಳ್ಳಿ, ತೊಗರಿಕಟ್ಟೆಗಳಲ್ಲಿ ಈಚಲು ಕಡಿದು ಹೋರಾಟ ನಡೆಸಲಾಗಿತ್ತು. ನೀಲಗುಂದದಲ್ಲಿ ಅಂಚೆ ಕಚೇರಿ ಧ್ವಂಸಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.