ಹೊಸಪೇಟೆ (ವಿಜಯನಗರ): ‘ರಾಜ್ಯದ ಎಲ್ಲ ಮೃಗಾಲಯಗಳ ಪ್ರಾಣಿಗಳಿಗೆ ಈ ಹಿಂದಿನಂತೆ ದನದ ಮಾಂಸ ಪೂರೈಸಲು ಚಿಂತನೆ ನಡೆದಿದೆ. ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ಕಾಯ್ದೆ ಸಡಿಲಗೊಳಿಸಿ, ಮೃಗಾಲಯಗಳ ಪ್ರಾಣಿಗಳಿಗೆ ದನದ ಮಾಂಸ ಕೊಡಲು ವಿನಾಯಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ತಿಳಿಸಿದರು.
ಶನಿವಾರ ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಇಷ್ಟರಲ್ಲೇ ಮೃಗಾಲಯ ಪ್ರಾಧಿಕಾರದ ಸಭೆ ನಡೆಯಲಿದೆ. ಆ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿದ ನಂತರ ಸರ್ಕಾರಕ್ಕೆ ಇನ್ನೊಮ್ಮೆ ಮನವಿ ಸಲ್ಲಿಸಲಾಗುವುದು. ಕೆಲವು ಕಡೆ ಪ್ರಾಣಿಗಳು ಚಿಕನ್ಗೆ ಹೊಂದಿಕೊಂಡಿವೆ. ಕೆಲವೆಡೆ ಇನ್ನಷ್ಟೇ ಹೊಂದಿಕೊಳ್ಳುತ್ತಿವೆ. ಆದರೆ, ದನದ ಮಾಂಸವೇ ಅವುಗಳಿಗೆ ಅಚ್ಚುಮೆಚ್ಚು. 13 ವರ್ಷ ಮೇಲಿನ ಹಸುಗಳನ್ನು ಮೃಗಾಲಯಗಳಿಗೆ ಕೊಡಬಹುದು. ಟೆಂಡರ್ ಕರೆದು, ನಿರ್ದಿಷ್ಟ ಸಂಸ್ಥೆ ಅಥವಾ ವ್ಯಕ್ತಿ ಮೂಲಕ ದನದ ಮಾಂಸ ಪೂರೈಸಲು ವ್ಯವಸ್ಥೆ ಮಾಡಬಹುದು’ ಎಂದು ಹೇಳಿದರು.
‘ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಯೋಜನೆಯಡಿ ರಾಜ್ಯದ ಎಲ್ಲ ಮೃಗಾಲಯಗಳ ನಿರ್ವಹಣೆಗೆ ಶೇ 0.5ರಷ್ಟು ಹಣ ಮೀಸಲಿಡುವಂತೆ ಕೋರಿ ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಅವರಿಗೆ ಪತ್ರ ಬರೆದಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.