ಹೊಸಪೇಟೆ (ವಿಜಯನಗರ): ನಗರದ ಹೊರವಲಯದ ಕೊಂಡನಾಯಕನಹಳ್ಳಿ ಸಮೀಪದ ವಿಜಯಶ್ರೀ ರೆಸಾರ್ಟ್ ಅಂಡ್ ಹೆರಿಟೇಜ್ ವಿಲೇಜ್ಗೆ ‘ಬೆಸ್ಟ್ ನ್ಯೂ ವೆಡ್ಡಿಂಗ್ ಡೆಸ್ಟಿನೇಶನ್ ಇನ್ ಇಂಡಿಯಾ’ ಪ್ರಶಸ್ತಿ ಒಲಿದಿದೆ.
ನವದೆಹಲಿ ಮೂಲದ ‘ವರ್ಲ್ಡ್ವೈಡ್ ಅಚೀವರ್ಸ್’ ವಿವಿಧ ವಿಭಾಗಗಳಲ್ಲಿ ಈ ಪ್ರಶಸ್ತಿ ಕೊಡುತ್ತದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಜಗತ್ತಿನ 22 ರಾಷ್ಟ್ರಗಳ 520 ಹೆರಿಟೇಜ್ ವಿಲೇಜ್ಗಳ ಪೈಕಿ ವಿಜಯಶ್ರೀಗೆ ಅತ್ಯುತ್ತಮ ಸೇವಾ ವಿಭಾಗದಲ್ಲಿ ಪ್ರಶಸ್ತಿ ಸಂದಿದೆ.
‘ಹನ್ನೆರಡು ವರ್ಷಗಳ ಹಿಂದೆ ಹುಟ್ಟಿಕೊಂಡ ವಿಜಯಶ್ರೀ ಹೆರಿಟೇಜ್ಗೆ ಇಷ್ಟು ಕಡಿಮೆ ಅವಧಿಯಲ್ಲಿ ಪ್ರಶಸ್ತಿ ಬಂದಿರುವುದಕ್ಕೆ ಸಂತಸವಾಗಿದೆ. 17 ಎಕರೆಯಲ್ಲಿ 43 ಕೊಠಡಿಗಳ ಸೌಲಭ್ಯ ಇದೆ. ವಿಶಾಲವಾದ ಹಚ್ಚ ಹಸಿರಿನ ಉದ್ಯಾನ ಇದೆ. ಬರುವ ದಿನಗಳಲ್ಲಿ 100 ಹೆಚ್ಚುವರಿ ಕೊಠಡಿ ನಿರ್ಮಿಸಲಾಗುವುದು. ಆರಂಭದಿಂದಲೂ ಮದ್ಯ, ಮಾಂಸಾಹಾರ ಇಟ್ಟಿಲ್ಲ. ಶುದ್ಧ ಸಸ್ಯಾಹಾರ ನೀಡಲಾಗುತ್ತದೆ. ಇದುವರೆಗೆ ಸುಮಾರು 350ಕ್ಕೂ ಹೆಚ್ಚು ಮದುವೆಗಳು ನಮ್ಮಲ್ಲಿ ನಡೆದಿವೆ’ ಎಂದು ವಿಜಯಶ್ರೀ ಹೆರಿಟೇಜ್ನ ವ್ಯವಸ್ಥಾಪಕ ನಿರ್ದೇಶಕ ರಾಜು ಭೂರಟ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಹೊಸಪೇಟೆಯಲ್ಲಿ ಸದ್ಯ 10,000 ಕೊಠಡಿಗಳ ಸೌಲಭ್ಯವಿರುವ ಅನೇಕ ಹೋಟೆಲ್ಗಳಿವೆ. ವಿಶ್ವಪ್ರಸಿದ್ಧ ಹಂಪಿ ಸನಿಹದಲ್ಲೇ ಇರುವುದರಿಂದ ಪ್ರವಾಸೋದ್ಯಮಕ್ಕೆ ಇನ್ನೂ ಹೆಚ್ಚಿನ ಸಾಧ್ಯತೆಗಳಿವೆ. ಪ್ರವಾಸಿಗರು ಬಂದು ಹೋಗುವುದಕ್ಕೆ ರಸ್ತೆ, ರೈಲು, ವಿಮಾನ ಸೌಲಭ್ಯ ಇದೆ. ದಕ್ಷಿಣ ಭಾರತೀಯರಿಗೆ ನೆಚ್ಚಿನ ಮದುವೆಯ ಸ್ಥಳವೆಂದರೆ ಗೋವಾ ಖ್ಯಾತಿ ಗಳಿಸಿತ್ತು. ಈ ಸಲ ಹಂಪಿಗೆ ಆ ಭಾಗ್ಯ ಒಲಿದಿರುವುದು ಖುಷಿ ತಂದಿದೆ. ಇದರೊಂದಿಗೆ ನಮ್ಮ ಜವಾಬ್ದಾರಿಯು ಹೆಚ್ಚಾಗಿದೆ’ ಎಂದು ಹೇಳಿದರು.
ವಿಜಯಶ್ರೀ ಹೆರಿಟೇಜ್ನ ಮಾಲೀಕರಾದ ಬಾಬುಲಾಲ್ ಭೂರಟ್, ವ್ಯವಸ್ಥಾಪಕ ಅನಿರುದ್ಧ್, ಕಾಂಗ್ರೆಸ್ ಮುಖಂಡ ಸಿದ್ದನಗೌಡ, ನಾಗಣ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.