ADVERTISEMENT

ಅನ್ಯಾಯದ ವಿರುದ್ಧ ಹೋರಾಡಿದ್ದ ಭಗತ್‌ಸಿಂಗ್‌: ರವಿಕಿರಣ್

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 11:02 IST
Last Updated 29 ಸೆಪ್ಟೆಂಬರ್ 2021, 11:02 IST
ಹೊಸಪೇಟೆಯ ಮುನ್ಸಿಪಲ್‌ ಮೈದಾನದಲ್ಲಿ ಎಐಡಿವೈಒ, ಎಐಡಿಎಸ್‌ಒ ಸಂಘಟನೆಗಳಿಂದ ಹುತಾತ್ಮ ಭಗತ್‌ಸಿಂಗ್‌ ಅವರ ಜನ್ಮದಿನ ಆಚರಿಸಲಾಯಿತು
ಹೊಸಪೇಟೆಯ ಮುನ್ಸಿಪಲ್‌ ಮೈದಾನದಲ್ಲಿ ಎಐಡಿವೈಒ, ಎಐಡಿಎಸ್‌ಒ ಸಂಘಟನೆಗಳಿಂದ ಹುತಾತ್ಮ ಭಗತ್‌ಸಿಂಗ್‌ ಅವರ ಜನ್ಮದಿನ ಆಚರಿಸಲಾಯಿತು   

ಹೊಸಪೇಟೆ (ವಿಜಯನಗರ): ‘ಹುತಾತ್ಮ ಭಗತ್‌ಸಿಂಗ್‌ ಅವರು ಮನುಷ್ಯನ ಮೇಲಾಗುವ ಎಲ್ಲಾ ರೀತಿಯ ಅನ್ಯಾಯಗಳ ವಿರುದ್ಧ ಹೋರಾಡಿದ್ದರು. ಹೀಗಾಗಿಯೇ ಅವರು ಯುವಕರಿಗೆ ಹೆಚ್ಚು ಪ್ರಸ್ತುತರಾಗುತ್ತಾರೆ’ ಎಂದು ಎಐಡಿಎಸ್‍ಒ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಸಮಿತಿ ಕಾರ್ಯದರ್ಶಿ ರವಿಕಿರಣ್ ಹೇಳಿದರು.

ನಗರದ ಮುನ್ಸಿಪಲ್‌ ಮೈದಾನದಲ್ಲಿ ಎಐಡಿವೈಒ ಹಾಗೂ ಎಐಡಿಎಸ್‌ಒ ಜಂಟಿಯಾಗಿ ಏರ್ಪಡಿಸಿದ್ದ ಭಗತ್‌ ಸಿಂಗ್‌ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮನುಷ್ಯನಿಂದ ಮನುಷ್ಯನ ಮೇಲೆ ಉಂಟಾಗುವ ಎಲ್ಲ ಅನ್ಯಾಯಗಳನ್ನು ಕೊನೆಗಾಣಿಸುವ ಸಮಾಜವಾದಿ ವ್ಯವಸ್ಥೆಯನ್ನು ಭಗತ್ ಸಿಂಗ್ ಪ್ರತಿಪಾದಿಸುತ್ತಿದ್ದರು. ಬಡತನ, ನಿರುದ್ಯೋಗ, ಆರ್ಥಿಕ ಬಿಕ್ಕಟ್ಟು ಇಲ್ಲದ ಸುಭದ್ರ ಆರ್ಥಿಕ ವ್ಯವಸ್ಥೆಯನ್ನು ರೂಪಿಸಿ, ರೈತ-ಕಾರ್ಮಿಕರ ಹಿತ ಬಯಸುವ ವ್ಯವಸ್ಥೆಯ ಪರವಾಗಿ ಅವರು ಸದಾ ಮಾತನಾಡುತ್ತಿದ್ದರು’ ಎಂದು ಹೇಳಿದರು.

ADVERTISEMENT

‘ಭಗತ್‍ಸಿಂಗ್ ಆರಂಭದಲ್ಲಿ ತಮ್ಮ ಸಾಹಸದ ಮೂಲಕ ಭಾರತೀಯರ ಸ್ವಾಭಿಮಾನವನ್ನು ಎತ್ತಿ ಹಿಡಿದರು. ನಂತರ ಸಾಮೂಹಿಕ ಹೋರಾಟದ ಅಗತ್ಯ ಮನಗಂಡರು. ಬಡವರ ರಕ್ತವನ್ನು ಹೀರಿ ಬೆಳೆಯುವ ಶ್ರೀಮಂತರ ಪರವಾದ ಬಂಡವಾಳಶಾಹಿ ವ್ಯವಸ್ಥೆಯನ್ನು ನಿರಂತರವಾಗಿ ಟೀಕಿಸುತ್ತಿದ್ದರು’ ಎಂದು ಎಐಡಿವೈಒ ತಾಲ್ಲೂಕು ಅಧ್ಯಕ್ಷ ಎನ್‌.ಎಲ್‌. ಪಂಪಾಪತಿ ತಿಳಿಸಿದರು.

ಲಕ್ಷ್ಮಿ ಕ್ರಾಂತಿ ಗೀತೆ ಹಾಡಿದರು. ವಾಲ್ಮೀಕಿ ಐಟಿಐ ಕಾಲೇಜಿನ ಪ್ರಾಚಾರ್ಯ ಶ್ರೀರಾಮುಲು, ಟಿಎಂಎಇ ಐಟಿಐ ಕಾಲೇಜಿನ ಪ್ರಾಚಾರ್ಯ ಫಕ್ರುದ್ದೀನ್‌, ಎಐಡಿವೈಒ ಯುವಜನ ಸಂಘಟನೆಯ ಸದಸ್ಯೆ ಶಿವಮ್ಮ ಇದ್ದರು.

‘ವೈಚಾರಿಕತೆ ಬೆಳೆಸಿದರು’:

ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಐಟಿಐ ಕಾಲೇಜಿನಲ್ಲಿ ಬುಧವಾರ ನಡೆದ ಭಗತ್‌ ಸಿಂಗ್‌ ಜನ್ಮದಿನ ಕಾರ್ಯಕ್ರಮದಲ್ಲಿ ಮಂಜುಳಾ ಡೊಳ್ಳಿ ಮಾತನಾಡಿ, ‘ಬ್ರಿಟಿಷ್ ಅಧಿಕಾರಿಗಳಿಗೆ ಸಿಂಹಸ್ವಪ್ನರಾಗಿದ್ದ ಭಗತ್‌ಸಿಂಗ್‌, ಜನರಲ್ಲಿ ಸಮಾಜವಾದಿ ವೈಚಾರಿಕತೆ ಸಿದ್ಧಾಂತ ಬೆಳೆಸಿದರು’ ಎಂದರು.

ಕಾಲೇಜಿನ ಪ್ರಾಧ್ಯಾಪಕರಾದ ಬಿದರಗಡ್ಡಿ, ವಂದನಾ, ರಾಘವೇಂದ್ರ, ಮಣಿ, ಬಂಗಾರು, ರಾಕೇಶ್, ಹೊನ್ನೂರಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.