ಬೆಳಗಾವಿ/ ರಾಮದುರ್ಗ:ವಿಧಾನಸಭೆ ಚುನಾವಣೆಯಲ್ಲಿ ತಾವು ಗೆಲುವು ಸಾಧಿಸಿರುವ ಕ್ಷೇತ್ರಹೆಚ್ಚೂ ಕಡಿಮೆ ಪಾಕಿಸ್ತಾನ ಇದ್ದಂತೆಯೇ ಇದೆ ಎಂದುಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಹಿಂದುಳಿದ ವರ್ಗ 2ಎ ಮೀಸಲಾತಿಗೆ ಆಗ್ರಹಿಸಿ ಜಿಲ್ಲೆಯ ರಾಮದುರ್ಗದಲ್ಲಿ ಗುರುವಾರ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ವೈರಲ್ ಆಗಿದೆ.
‘ದೆಹಲಿಯಿಂದ ನನ್ನ ಬಳಿಗೆ ಬಂದಿದ್ದ ಕೆಲವರು, ನಿಮ್ಮನ್ನು ಮುಖ್ಯಮಂತ್ರಿ ಮಾಡ್ತೀವಿ ₹ 2,500 ಕೋಟಿ ಸಿದ್ಧವಿಟ್ಟುಕೊಳ್ಳಿ ಎಂದಿದ್ದರು’ ಎನ್ನುವ ಮೂಲಕ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ.
ಮುಂದುವರಿದು,‘ನಾನು ರೊಕ್ಕ ಬಿಚ್ಚುವುದಿಲ್ಲ; ಆದರೂ ಮಂದಿ ಮತ ಹಾಕ್ತಾರೆ. ಅವನು ಏನಿದ್ದರೂ ಮುಂದೆ ಒದರ್ತಾನ್ರಿ, ಬೆನ್ನಾಗ ಚಾಕು ಹಾಕಲ್ಲ ಅಂತಾರೆ. ನಾನು ಯಾರಿಗೂ ಕಿರಿಕಿರಿ ಮಾಡುವವನಲ್ಲ. ವಿಜಯಪುರದಲ್ಲಿ ಎಂತಹ ಕ್ಷೇತ್ರದಲ್ಲಿ ಆರಿಸಿ ಬಂದಿದ್ದೇನೆ? ಹೆಚ್ಚೂ ಕಡಿಮೆ ಪಾಕಿಸ್ತಾನ ಇದ್ದಂತೆಯೇ ಇದೆ. ಅಲ್ಲಿ ಆರಿಸಿ ಬಂದಿದ್ದೇನೆ. ಏಕೆಂದರೆ ಅವರದ್ದು (ಮುಸ್ಲಿಮರದ್ದು) ಲಕ್ಷ ಮತವಿದ್ದರೆ, ನಮ್ದು ಒಂದೂವರೆ ಲಕ್ಷ ಮತಗಳಿವೆ. ನಮ್ಮ ಮಂದಿ ಹೊರಗೆ ಬರುತ್ತಿರಲಿಲ್ಲ. ಹೊರಗೆ ಬಾರದಿದ್ದರೆ ಪಾಕಿಸ್ತಾನ ಆಗುತ್ತೆ ನೋಡಿ ಎಂದೆ, ಆಗ ಬಂದು ಮತ ಹಾಕಿದರು’ ಎಂದಿದ್ದಾರೆ.
ಯತ್ನಾಳ ಅವರು 2019ರ ವಿಧಾನಸಭೆ ಚುನಾವನೆಯಲ್ಲಿ ವಿಜಯಪುರ ನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.