
ಹೊಸಪೇಟೆಯ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಬುದ್ಧ ಜಯಂತಿಯನ್ನು ಹಂಪಿ ವಿಜಯನಗರ ಬುದ್ಧ ವಿಹಾರ ನಿರ್ಮಾಣ ಟ್ರಸ್ಟ್ ಮತ್ತು ವಿಜಯನಗರ ಜಿಲ್ಲಾ ಬಾಬಾಸಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಸಂಘದ ನೇತೃತ್ವದಲ್ಲಿ ಆಚರಿಸಲಾಯಿತು.
ಹೊಸಪೇಟೆ (ವಿಜಯನಗರ): ‘2,500 ವರ್ಷಗಳ ಹಿಂದೆಯೇ ಗೌತಮ ಬುದ್ಧರು ಈ ನೆಲದಲ್ಲಿ ಜೀವಂತವಾಗಿದ್ದ ಅಸಮಾನತೆ, ಜಾತೀಯತೆ, ಅಸ್ಪೃಶ್ಯತೆಯನ್ನು ಖಂಡಿಸಿದ್ದರು ಎಂದರೆ ಇಂದಿಗೂ ಜೀವಂತವಿರುವ ಈ ಎಲ್ಲವುಗಳ ಸೃಷ್ಟಿಕರ್ತರು ಯಾರೆಂಬುದನ್ನು ತಿಳಿದುಕೊಳ್ಳಬೇಕು’ ಎಂದು ಹಂಪಿ ವಿಜಯನಗರ ಬುದ್ಧ ವಿಹಾರ ನಿರ್ಮಾಣ ಟ್ರಸ್ಟ್ನ ಅಧ್ಯಕ್ಷ ಹಾಗೂ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ ಹೇಳಿದರು.
ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಟ್ರಸ್ಟ್ ಮತ್ತು ವಿಜಯನಗರ ಜಿಲ್ಲಾ ಬಾಬಾಸಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಸಂಘದ ನೇತೃತ್ವದಲ್ಲಿ ಆಚರಿಸಿದ ಬುದ್ಧ ಜಯಂತಿಯಲ್ಲಿ ಅವರು ಮಾತನಾಡಿದರು.
‘ನಾವೆಲ್ಲರೂ ಇನ್ನೂ ಸಹ ಸಿದ್ದಾರ್ಥರಾಗುತ್ತಿದ್ದೇವೆಯೇ ಹೊರತು (ಸ್ಥಾವರ - ದೇವಾಲಯಗಳು) ಗೌತಮ ಬುದ್ಧರಾಗುತ್ತಿಲ್ಲ (ಜಂಗಮ- ಜ್ಞಾನವಂತರು)’ ಎಂದರು.
ಸಾಹಿತಿ ಪೀರ್ ಪಾಷಾ ಮಾತನಾಡಿ, ಪ್ರೀತಿಯ ಮೂಲಕ ಜಗತ್ತನ್ನೇ ಗೆಲ್ಲಬಹುದು ಎಂಬ ವಿಶ್ವಾಸವನ್ನು ಬುದ್ಧನ ತತ್ವ ಸಾರುತ್ತದೆ ಎಂದರು.
ವಿಜಯನಗರ ಬುದ್ಧ ವಿಹಾರ ನಿರ್ಮಾಣ ಟ್ರಸ್ಟ್ ಕಾರ್ಯದರ್ಶಿ ಸೋಮಶೇಖರ್ ಬಣ್ಣದಮನೆ ಮಾತನಾಡಿ, ‘ನಾವ್ಯಾರೂ ಧರ್ಮ ದ್ರೋಹಿಗಳಲ್ಲ ನಮ್ಮ ಧರ್ಮಕ್ಕೆ ದ್ರೋಹ ಬಗೆದವರ ವಿರುದ್ಧ ನಾವು ಬೌದ್ಧಿಕ ಹೋರಾಟ ಮಾಡಬೇಕಾಗಿದೆ’ ಎಂದರು.
ನಿಂಬಗಲ್ ರಾಮಕೃಷ್ಣ, ಸಣ್ಣ ಮಾರೆಪ್ಪ, ಕಾರಿಗನೂರು ಯರ್ರಿಸ್ವಾಮಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.