ADVERTISEMENT

ಅನುಮತಿ ಪಡೆಯದೆ ರ್‍ಯಾಲಿ: 25 ಬೈಕ್ ವಶ, ಶಾಸಕ ಪರಮೇಶ್ವರ ನಾಯ್ಕ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2023, 14:28 IST
Last Updated 14 ಏಪ್ರಿಲ್ 2023, 14:28 IST
ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಅವರು ಬೆಂಬಲಿಗರೊಂದಿಗೆ ತೆರೆದ ವಾಹನದಲ್ಲಿ ರ್‍ಯಾಲಿ ನಡೆಸುತ್ತಿದ್ದಾಗ ಅದನ್ನು ಡಿವೈಎಸ್ಪಿ ಹಾಲಮೂರ್ತಿರಾವ್ ಅವರು ತಡೆದರು
ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಅವರು ಬೆಂಬಲಿಗರೊಂದಿಗೆ ತೆರೆದ ವಾಹನದಲ್ಲಿ ರ್‍ಯಾಲಿ ನಡೆಸುತ್ತಿದ್ದಾಗ ಅದನ್ನು ಡಿವೈಎಸ್ಪಿ ಹಾಲಮೂರ್ತಿರಾವ್ ಅವರು ತಡೆದರು   

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ಚುನಾವಣಾ ನೀತಿ ಸಂಹಿತಿ ಜಾರಿಯಲ್ಲಿದ್ದರೂ ಅನುಮತಿ ಪಡೆಯದೆ ಕಾಂಗ್ರೆಸ್‌ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಬೆಂಬಲಿಗರು ಶುಕ್ರವಾರ ಹಮ್ಮಿಕೊಂಡಿದ್ದ ಬೈಕ್ ರ್‍ಯಾಲಿಯನ್ನು ಪೊಲೀಸರು ತಡೆದು 25 ಮೋಟಾರ್ ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಶಾಸಕ ಪರಮೇಶ್ವರ ನಾಯ್ಕ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಟವಾಳಗಿ ಕೊಟ್ರೇಶ್ ವಿರುದ್ಧ ಪಟ್ಟಣ ಠಾಣೆಯಲ್ಲಿ ನೀತಿ ಸಂಹಿತಿ ಉಲ್ಲಂಘನೆ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್ ಬಿ. ಫಾರಂನೊಂದಿಗೆ ಕ್ಷೇತ್ರಕ್ಕೆ ಆಗಮಿಸುತ್ತಿದ್ದ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಅವರನ್ನು ಪಕ್ಷದ ಕಾರ್ಯಕರ್ತರು, ಬೆಂಬಲಿಗರು ತಾಲ್ಲೂಕಿನ ಕೊಮಾರನಹಳ್ಳಿ ತಾಂಡಾದ ಗಡಿಯಲ್ಲಿ ಸ್ವಾಗತಿಸಿ, ಅಲ್ಲಿಂದ ಶಾಸಕರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡುತ್ತಾ ಬೈಕ್ ರ್‍ಯಾಲಿಯಲ್ಲಿ ಪಟ್ಟಣಕ್ಕೆ ಕರೆ ತರುತ್ತಿದ್ದರು. ಕೆಲವರು ರ್‍ಯಾಲಿಯ ವಿಡಿಯೊವನ್ನು ಜಾಲತಾಣದಲ್ಲಿ ನೇರಪ್ರಸಾರ ಮಾಡಿದ್ದನ್ನು ಗಮನಿಸಿ ಅಧಿಕಾರಿಗಳು ಕಾರ್ಯಪ್ರವೃತ್ತರಾದರು.

ಡಿವೈಎಸ್ಪಿ ಹಾಲಮೂರ್ತಿರಾವ್ ನೇತೃತ್ವದ ಅಧಿಕಾರಿಗಳ ತಂಡ ಪಟ್ಟಣದ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗ ಕಚೇರಿ ಬಳಿ ಶಾಸಕರ ರ್‍ಯಾಲಿ ತಡೆದು, ಮೋಟಾರ್ ಬೈಕ್ ವಶಪಡಿಸಿಕೊಂಡರು. ಕೆಲವು ಕಾರ್ಯಕರ್ತರು ಒಳದಾರಿಗಳ ಮೂಲಕ ತಪ್ಪಿಸಿಕೊಂಡರು. ಈ ವೇಳೆ ಶಾಸಕರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ‘ನೀವು ಶಾಸಕರಾಗಿ ಕಾನೂನು ಪಾಲಿಸುವುದರಲ್ಲಿ ಮಾದರಿಯಾಗಿರಬೇಕು. ಅನುಮತಿ ಪಡೆಯದೆ ರ್‍ಯಾಲಿ ನಡೆಸಿ ನೀತಿ ಸಂಹಿತಿ ಉಲ್ಲಂಘಿಸಿದ್ದೀರಿ. ರ್‍ಯಾಲಿಯನ್ನು ಇಲ್ಲೇ ಸ್ಥಗಿತಗೊಳಿಸಿ’ ಎಂದು ಡಿವೈಎಸ್ಪಿ ಹಾಲಮೂರ್ತಿರಾವ್ ಹೇಳಿದರು.

‘ರ್‍ಯಾಲಿ ನಡೆಸಿ ಎಂದು ಯಾರನ್ನೂ ಕರೆದಿಲ್ಲ. ನನ್ನ ಮೇಲಿನ ಪ್ರೀತಿ, ಅಭಿಮಾನಕ್ಕಾಗಿ ಬೆಂಬಲಿಗರು ಬೈಕ್ ನಲ್ಲಿ ಬಂದು ಕ್ಷೇತ್ರದ ಗಡಿಯಲ್ಲಿ ಸ್ವಾಗತಿಸಿದ್ದಾರೆ. ಬೈಕ್ ರ್‍ಯಾಲಿ ನಡೆಸುವ ಉದ್ದೇಶವಿದ್ದಿದ್ದರೆ ಅನುಮತಿ ಪಡೆಯುತ್ತಿದ್ದೆವು. ಬೆಂಬಲಿಗರಿಂದ ಏನೋ ಆಚಾತುರ್ಯ ಆಗಿರಬಹುದು, ವಶಕ್ಕೆ ಪಡೆದಿರುವ ಬೈಕ್ ಗಳನ್ನು ವಾಪಸ್ ಕೊಡಿ’ ಎಂದು ಶಾಸಕ ಪರಮೇಶ್ವರ ನಾಯ್ಕ ಹೇಳಿದರು.

ನಂತರ ಬೆಂಬಲಿಗರು ರ್‍ಯಾಲಿ ಮೊಟಕುಗೊಳಿಸಿ ಶಾಸಕರನ್ನು ತೆರೆದ ವಾಹನದಲ್ಲಿ ಕರೆ ತಂದರು. ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಡಾ.ಬಿ.ಆರ್‌. ಅಂಬೇಡ್ಕರ್ ವೃತ್ತಗಳಲ್ಲಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಶಾಸಕರು ಮನೆಗೆ ತೆರಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಟವಾಳಗಿ ಕೊಟ್ರೇಶ, ಬಿ.ಹನುಮಂತಪ್ಪ, ಮುಖಂಡರಾದ ಅರವಳ್ಳಿ ವೀರಣ್ಣ, ಹನಕನಹಳ್ಳಿ ಹಾಲೇಶ, ಜಿ.ವಸಂತ ಇತರರು ಇದ್ದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.