ADVERTISEMENT

ದಾಂಡೇಲಿ ಹುಲಿಗೆ ಹಂಪಿ 'ಜೂ'ನಲ್ಲಿ ಆರೈಕೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2022, 14:23 IST
Last Updated 26 ಡಿಸೆಂಬರ್ 2022, 14:23 IST
ಹುಲಿಗೆ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ
ಹುಲಿಗೆ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ   

ಹೊಸಪೇಟೆ (ವಿಜಯನಗರ): ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗಾಯಗೊಂಡು ನಿತ್ರಾಣವಾಗಿದ್ದ ಹುಲಿಗೆ ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದ (ಹಂಪಿ ಜೂ) ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಆರೈಕೆ ಮಾಡಲಾಗುತ್ತಿದೆ.

‘ಕಾಳಿ ಹುಲಿ ಸಂರಕ್ಷಿತ ಅರಣ್ಯದಲ್ಲಿ ಹುಲಿ ಅಥವಾ ಇತರೆ ಪ್ರಾಣಿಗಳೊಂದಿಗೆ ಸಂಘರ್ಷಕ್ಕೆ ಇಳಿದು ಈ ಐದು ವರ್ಷ ವಯಸ್ಸಿನ ಹೆಣ್ಣು ಹುಲಿ ಗಾಯಗೊಂಡಿತ್ತು. ದಾಂಡೇಲಿ ಬಳಿ ದನದ ಕೊಟ್ಟಿಗೆಯಲ್ಲಿ ಅದನ್ನು ಸೆರೆ ಹಿಡಿದು ಡಿಸೆಂಬರ್‌ 19ರಂದು ಇಲ್ಲಿಗೆ ಕರೆತರಲಾಗಿತ್ತು. ಸುಸಜ್ಜಿತವಾದ ವನ್ಯಜೀವಿ ಆಸ್ಪತ್ರೆಯಲ್ಲಿ ಪಶು ವೈದ್ಯೆ ಡಾ. ವಾಣಿ ಹಾಗೂ ಅವರ ತಂಡದವರು ಸೂಕ್ತ ಚಿಕಿತ್ಸೆ ನೀಡಿ ಆರೈಕೆ ಮಾಡುತ್ತಿದ್ದಾರೆ. ನಿತ್ಯ ಪೌಷ್ಟಿಕ ಆಹಾರ ನೀಡಲಾಗುತ್ತಿದ್ದು, ಆರೋಗ್ಯದಲ್ಲಿ ಸುಧಾರಣೆಯಾಗಿ ಚುರುಕಾಗಿ ಓಡಾಡುತ್ತಿದೆ. ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದೆ’ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎನ್‌. ಕಿರಣ್‌ ತಿಳಿಸಿದ್ದಾರೆ.

ಹುಲಿ ಸಂಪೂರ್ಣ ಗುಣಮುಖ ಆಗುವವರೆಗೆ ಇಲ್ಲಿಯೇ ಆರೈಕೆ ಮಾಡಲಾಗುವುದು. ಮೇಲಧಿಕಾರಿಗಳಿಂದ ಸೂಚನೆ ಬಂದ ನಂತರ ಪುನಃ ಕಾಡಿಗೆ ಬಿಡುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದೂ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.