ಹರಪನಹಳ್ಳಿ: ‘ಎಡಗಡೆ ದ್ಯಾಮಕ್ಕ, ಬಲಗಡೆ ದೇವಕ್ಕ, ನಡುವೆ ಕುಂತಾಳೆ ಗಡಿನಾಡ ಊರಮ್ಮ, ಭಾಗಿ ನೋಡಲೇ ಮೈದೂರು ದಸರಾ ಪರಸಿಯ’
ಈ ದೇಸಿ ಹಾಡು ಮೈದೂರು ಗ್ರಾಮದ ದಸರಾ ವಿಶೇಷತೆಗೆ ಸಾಕ್ಷಿ. ಗ್ರಾಮದಲ್ಲಿ ಒಂಬತ್ತು ದಿನ ಊರಮ್ಮ ದೇವಿಗೆ ಪೂಜೆ, ಅಲಂಕಾರ, ಶ್ರೀದೇವಿ ಪುರಾಣ ಪ್ರವಚನ ನಡೆಯುತ್ತದೆ. ಕೊನೆಯ ದಿನ ಬನ್ನಿ ಮುಡಿಯುವ ಮೆರವಣಿಗೆ ಕಣ್ತುಂಬಿಕೊಳ್ಳಲು ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತರು ಸೇರುತ್ತಾರೆ. ಆ ದಿನ ದೇವಿಗೆ ವಿಶೇಷಾಲಂಕಾರ ಮಾಡಿ, ಅಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ಭಕ್ತರ ಹೆಗಲ ಮೇಲೆ ಹೊತ್ತುಕೊಂಡು, ಬಳಿಗನೂರು ಗ್ರಾಮದ ರಸ್ತೆಯಲ್ಲಿರುವ ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸುತ್ತಾರೆ.
5 ಕರಗಲ್ಲುಗಳು, 5 ಆಂಜನೇಯ ದೇವಸ್ಥಾನಗಳು ಸೇರಿ ಮೈದೂರು ಗ್ರಾಮವಾಗಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ಅಗ್ರಹಾರವಾಗಿತ್ತು. ಗ್ರಾಮದಲ್ಲಿರುವ ಮಹಾಸತಿ ಕಲ್ಲುಗಳು, ಶಾಸನಗಳಿಂದ ಮೊದಲಿಗೆ ಈ ಗ್ರಾಮಕ್ಕೆ ಮೈತೂರು, ಮೈದೂರು, ಐದೂರು, ಮೈದೂರ ಎನ್ನುವ ಹೆಸರುಗಳಿದ್ದವು.
ಊರಮ್ಮ ದೇವಿ ಗಾಳಿ ರೂಪದಲ್ಲಿ ಗ್ರಾಮವನ್ನು ಪ್ರವೇಶಿಸಿ ಹೆಗ್ಳಾಪ್ಪರ ವಂಶಸ್ಥರ ಮನೆಯಲ್ಲಿ ನೆಲೆ ನಿಂತಳು ಎಂಬ ನಂಬಿಕೆ ಗ್ರಾಮಸ್ಥರದು. ದೇವಿಗೆ ಮರದ ಪೆಟ್ಟಿಗೆಯಲ್ಲಿರಿಸಿ ಈಗಲೂ ಪೂಜಿಸಲಾಗುತ್ತದೆ. ದಸರಾ ಮತ್ತು ನಾಗರಪಂಚಮಿ ಹಬ್ಬಗಳಲ್ಲಿ ದೇವಿಯ ಮೂರ್ತಿ ಜೋಡಿಸಿ (ನೆಲೆ) ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.