ಹೊಸಪೇಟೆ (ವಿಜಯನಗರ): ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ವಿಜಯನಗರ ಜಿಲ್ಲಾ ಮಾದಿಗ ಸಮಾಜದವರು ಸೋಮವಾರ ನಗರದಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡರು.
ಹರಿಹರದ ಪ್ರೊ.ಬಿ.ಕೃಷ್ಣಪ್ಪ ಅವರ ಸ್ಮಾರಕದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ವರೆಗೆ ಜಾಥಾ ನಡೆಯಲಿದ್ದು, ವಿಜಯನಗರ ಜಿಲ್ಲೆಯವರು ಹರಿಹರಕ್ಕೆ ತೆರಳಿ ಅಲ್ಲಿ ಜಾಥಾ ಸೇರುವರು.
ಮುಖಂಡ ರಾಮಚಂದ್ರ ಮಾತನಾಡಿ, ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಕೈಗೊಂಡಿರುವ ಜಾಥಾದಲ್ಲಿ ಜಿಲ್ಲೆಯ 50 ಜನ ಪಾಲ್ಗೊಳ್ಳುವರು. ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಬರುವ 101 ಜಾತಿಗಳು ಜಾಥಾದಲ್ಲಿ ಭಾಗವಹಿಸಲಿವೆ. ಒಳ ಮೀಸಲಾತಿಯಲ್ಲಿ ಅಸ್ಪೃಶ್ಯ ಜಾತಿಗಳಿಗೆ ಸಿಗಬೇಕಾದ ಪಾಲು ಸಿಗುತ್ತಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಎ.ಜೆ.ಸದಾಶಿವ ಆಯೋಗ ವರದಿ ಸುಲಭವಾಗಿ ಜಾರಿಗೊಳಿಸಬಹುದು. ಇದರಿಂದ ಸಮಾಜದ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಸರ್ಕಾರಗಳು ಬೇಡಿಕೆ ಈಡೇರಿಸುವ ಭರವಸೆ ಇದೆ ಎಂದರು.
ಮುಖಂಡರಾದ ಗ್ಯಾನಪ್ಪ ಬಡಿಗೇರ, ಜಗನ್ನಾಥ, ಎ.ಬಸವರಾಜ, ಶೇಷು, ಶೇಕ್ಷಾವಲಿ, ಪಂಪಾಪತಿ, ಜೆ.ಬಿ.ರಾಘವೇಂದ್ರ, ಉದಯ್ ಕುಮಾರ್ ಎಚ್.ಆರ್, ವಿಜಯ್ ಕುಮಾರ್, ಓಬಳೇಶ, ವಿನೋದ ಕುಮಾರ್, ಕರಿಯಪ್ಪ, ಮಾರೇಶ, ನಾಗೇಂದ್ರ, ಮಲ್ಲಪ್ಪ ಎಸ್.ಎಚ್, ತಾಯಪ್ಪ, ಮಹಾಂತೇಶ ಇತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.