ADVERTISEMENT

ಹೊಸಪೇಟೆ: ಬಾಳೆಗೆ ಕನಿಷ್ಠ ಬೆಂಬಲ ಬೆಲೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 12:08 IST
Last Updated 18 ಆಗಸ್ಟ್ 2021, 12:08 IST
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿಜಯನಗರ ಬಾಳೆ ಮತ್ತು ತೋಟಗಾರಿಕೆ ಬೆಳೆಗಾರರ ಕೃಷಿಕರ ಸಂಘದವರು ಬುಧವಾರ ಹೊಸಪೇಟೆ ಎಪಿಎಂಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿಜಯನಗರ ಬಾಳೆ ಮತ್ತು ತೋಟಗಾರಿಕೆ ಬೆಳೆಗಾರರ ಕೃಷಿಕರ ಸಂಘದವರು ಬುಧವಾರ ಹೊಸಪೇಟೆ ಎಪಿಎಂಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಹೊಸಪೇಟೆ (ವಿಜಯನಗರ): ಸ್ಥಳೀಯವಾಗಿ ಬೆಳೆಯುವ ಸುಗಂಧಿ, ಯಾಲಕ್ಕಿ ಬಾಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿಜಯನಗರ ಬಾಳೆ ಮತ್ತು ತೋಟಗಾರಿಕೆ ಬೆಳೆಗಾರರ ಕೃಷಿಕರ ಸಂಘ ಆಗ್ರಹಿಸಿದೆ.

ಎರಡು ಸಂಘಟನೆಗಳ ಮುಖಂಡರು ಬುಧವಾರ ಇಲ್ಲಿನ ಎಪಿಎಂಸಿ ಅಧ್ಯಕ್ಷರ ಮೂಲಕ ಮುಖ್ಯಮಂತ್ರಿಯವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಖಾಜಾ ಹುಸೇನ್‌ ನಿಯಾಜಿ ಮಾತನಾಡಿ, ‘ಕೋವಿಡ್‌ ಲಾಕ್‌ಡೌನ್‌, ಬಿರುಗಾಳಿ ಮಳೆಯಿಂದ ಹೋದ ವರ್ಷ ಬಾಳೆ ಬೆಳೆಗಾರರು ತೀವ್ರ ನಷ್ಟ ಅನುಭವಿಸಿದ್ದಾರೆ. ಈಗ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ಇದರಿಂದ ರೈತರು ಕಂಗಾಲಾಗಿದ್ದು, ಸರ್ಕಾರ ಕೂಡಲೇ ಅವರ ನೆರವಿಗೆ ಧಾವಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಪ್ರತಿ ಕೆ.ಜಿ ಸುಗಂಧಿ ಬಾಳೆಗೆ ₹30, ಯಾಲಕ್ಕಿಗೆ ₹60 ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಸಣ್ಣ ಹಾಗೂ ತುಂಡು ಗೊನೆಗಳನ್ನು ಅರ್ಧ ದರಕ್ಕೆ ಖರೀದಿಸುವುದನ್ನು ತಡೆಯಬೇಕು. ತೂಕದ ಮೂಲಕವೇ ಬಾಳೆಗೊನೆ ಖರೀದಿಸಬೇಕು. ಬಾಳೆ, ಫಲ, ಪುಷ್ಪ, ತರಕಾರಿ ಮತ್ತಿತರ ಕೃಷಿ ಉತ್ಪನ್ನಗಳಿಗೆ ಎ.ಪಿ.ಎಂ.ಸಿ. ಕಾಯ್ದೆಗನುಗುಣವಾಗಿ ದಲ್ಲಾಳಿ ದರ ನಿಗದಿಪಡಿಸಬೇಕು. ಯಾವುದೇ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳ ತೂಕದಲ್ಲಿ ಮೋಸವಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ವೈ. ಯಮುನೇಶ್‌, ಎಪಿಎಂಸಿ ಅಧ್ಯಕ್ಷ ಗುಬಾಜಿ ನಾಗೇಂದ್ರಪ್ಪ, ಕೆ.ಮಲ್ಲಿಕಾರ್ಜುನ, ಎಂ.ಜಡೇಶ್, ಮಹಾರಾಜ ದುರುಗಪ್ಪ, ಟಿ.ಪರಶುರಾಮ, ದಾನೇಶ್, ಕೆ.ಮೂರ್ತಿ, ಕಂಪ್ಲಿ ನಾಗರಾಜ, ಎಸ್.ಗಾಳೆಪ್ಪ, ಬಿ.ವಿರೂಪಾಕ್ಷಪ್ಪ, ಕೂಡ್ಲಿಗಿ ಗಂಗಾಧರ, ಬಿಸಾಟಿ ಮಲ್ಲಯ್ಯ, ತಳಕಲ್ ತೇಜ, ಎಸ್.ಜಂಬಯ್ಯ, ಕೆ.ರಾಮಣ್ಣ, ಎಂ.ಮಂಜುನಾಥ, ಡೊಮ್ಮಿ ರಾಘವೇಂದ್ರ, ಹನುಮಂತ ರೆಡ್ಡಿ, ಎಂ.ರಮೇಶ್, ಗುರುಶಾಂತಪ್ಪ, ನೀಲಕಂಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.