ಹೊಸಪೇಟೆ: ವಿಜಯನಗರ ಜಿಲ್ಲೆಯ ಅತಿಸೂಕ್ಷ್ಮ ಮತಗಟ್ಟೆಗಳ ಮಾಹಿತಿ ಇದ್ದ ದಾಖಲೆಯನ್ನು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಿಂದ ಕಳವು ಮಾಡಲಾಗಿದ್ದು, ಈ ಸಂಬಂಧ ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸಿ.ಶಿವಶಂಕರ್ ವಿರುದ್ಧ ಟಿ.ಬಿ.ಡ್ಯಾಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
‘ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಅತಿಸೂಕ್ಷ್ಮ ಮತಗಟ್ಟೆಗಳ ಮಾಹಿತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠರು ಇ–ಮೇಲ್ ಮೂಲಕ ಜಿಲ್ಲಾಡಳಿತಕ್ಕೆ ರವಾನಿಸಿದ್ದರು. ಅದರ ಪ್ರಿಂಟೌಟ್ ತೆಗೆದಿದ್ದ ಪ್ರಥಮ ದರ್ಜೆ ಸಹಾಯಕ ಹರಿಕುಮಾರ್ ಅವರು ಪರಿಶೀಲನೆಗಾಗಿ ಮತ್ತು ಮೇಲಧಿಕಾರಿಗಳ ಸಹಿಗಾಗಿ ಶಿರಸ್ತೇದಾರ್ ಮನೋಜ್ ಲಾಡೆ ಅವರಿಗೆ ತಿಳಿಸಿ, ಅವರ ಮೇಜಿನ ಮೇಲೆ ಇರಿಸಿದ್ದರು. ಏಪ್ರಿಲ್ 15ರಂದು ಬೆಳಿಗ್ಗೆ 11.30ರ ವೇಳೆಗೆ ಕಚೇರಿಗೆ ಅತಿಕ್ರಮ ಪ್ರವೇಶ ಮಾಡಿದ ಬಿಜೆಪಿ ಕಾರ್ಯದರ್ಶಿ ಈ ದಾಖಲೆಯನ್ನು ಕಳವು ಮಾಡಿ, ಅದನ್ನು ತಮ್ಮ ಮೊಬೈಲ್ನಲ್ಲಿ ಪಿಡಿಎಫ್ ಮಾಡಿಕೊಂಡು ಪಕ್ಷದ ಇತರ ಕಾರ್ಯಕರ್ತರಿಗೆ ರವಾನಿಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ಶಿವಶಂಕರ್ ತಮ್ಮ ಮೊಬೈಲ್ನಿಂದ ಈ ಮಾಹಿತಿಯನ್ನು ಬೇರೆಯವರಿಗೆ ರವಾನಿಸಿದ ಕಾರಣ ಏಪ್ರಿಲ್ 17ರಂದು ಇಡೀ ಪ್ರಕರಣ ಬೆಳಕಿಗೆ ಬಂತು. ಮೇಲಧಿಕಾರಿಗಳೊಂದಿಗೆ ಚರ್ಚಿಸಲು ಸಮಯ ತೆಗೆದುಕೊಂಡಿದ್ದರಿಂದ ಇದೇ 19ರಂದು ಎಫ್ಐಆರ್ ದಾಖಲಿಸಲಾಗಿದೆ’ ಎಂದು ತಿಳಿಸಲಾಗಿದೆ.
ಕಾನೂನು ಹೋರಾಟ:
‘ಪ್ರಮುಖ ದಾಖಲೆಗಳಿರುವ ಕಡತಗಳನ್ನು ಸುರಕ್ಷಿತವಾಗಿ ಇಡಬೇಕಿರುವುದು ಜಿಲ್ಲಾಡಳಿತದ ಕರ್ತವ್ಯ. ಈ ವಿಚಾರದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಬೇಕಾಗುತ್ತದೆ. ತಮ್ಮ ಪಾಲಿನ ಕರ್ತವ್ಯಲೋಪ ಮುಚ್ಚಿಕೊಳ್ಳಲು ಕಳವು ದೂರು ನೀಡಿ ಎಫ್ಐಆರ್ ದಾಖಲಿಸಿದಂತೆ ಕಾಣುತ್ತಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.