ಹೊಸಪೇಟೆ (ವಿಜಯನಗರ): ರಂಜಾನ್ ಮಾಸಾಚರಣೆಯ ಅಂತಿಮ ದಿನವಾದ ಸೋಮವಾರ ಹೊಸಪೇಟೆ ಸಹಿತ ಜಿಲ್ಲೆಯಾದ್ಯಂತ ಮುಸ್ಲಿಮರು ಈದ್ ಉಲ್ ಫಿತ್ರ್ ಹಬ್ಬವನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸುತ್ತಿದ್ದು, ಬೆಳಿಗ್ಗೆಯೇ ಸಾವಿರಾರು ಮಂದಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದರು.
ನಗರದ ಅಂಬೇಡ್ಕರ್ ವೃತ್ತ ಸಮೀಪದ ಗುಲಾಮ್ ಷಾ ವಲಿ ದರ್ಗಾ ಒಳಗೊಂಡ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಮರು ಬೆಳಿಗ್ಗೆ 9 ಗಂಟೆಗೆ ಸಾಮೂಹಿಕ ಪ್ರಾರ್ಥನೆ ನಡೆಸಿದರು.
ನಗರದ ಆರ್ಟಿಒ ಕಚೇರಿ ಹಿಂಭಾಗದ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ 7.30ಕ್ಕೆ, ಕೆಕೆಆರ್ಟಿಸಿ ಬಸ್ ಡಿಪೋ ಸಮೀಪದ ಹೊಸ ಈದ್ಗಾ ಮೈದಾನದಲ್ಲಿ 8.30ಕ್ಕೆ, ಚಿತ್ತವಾಡ್ಗಿ, ಕಾರಿಗನೂರು ಈದ್ಗಾ ಮೈದಾನಗಳಲ್ಲಿ ಬೆಳಿಗ್ಗೆ 9ಕ್ಕೆ, ನಾಗೇನಹಳ್ಳಿ ಈದ್ಗಾ ಮೈದಾನದಲ್ಲಿ 9.30ಕ್ಕೆ ಹಾಗೂ ಟಿ.ಬಿ.ಡ್ಯಾಂ ಈದ್ಗಾ ಮೈದಾನದಲ್ಲಿ 10 ಗಂಟೆಗೆ ಸಾಮೂಹಿಕ ಪ್ರಾರ್ಥನೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಅದರಂತೆ ಎಲ್ಲಾ ಕಡೆಗಳಲ್ಲೂ ಶಾಂತಿಯುತವಾಗಿ ಸಾಮೂಹಿಕ ಪ್ರಾರ್ಥನೆಗಳು ನಡೆದವು.
ಇದಕ್ಕೆ ಮೊದಲಾಗಿ ಮೆರವಣಿಗೆಯಲ್ಲಿ ಸಾಗಿದ ಜನರು ಪರಸ್ಪರ ಶುಭಾಶಯ ಕೋರುತ್ತಿದ್ದದ್ದು ಗಮನ ಸೆಳೆಯಿತು. ಬಂಧು ಬಳಗದವರನ್ನು, ಸ್ನೇಹಿತರನ್ನು ಮನೆಗೆ ಆಹ್ವಾನಿಸಿ ಹಬ್ಬದ ಶುಭಾಶಯ ವಿನಿಯಮ ಮಾಡಿಕೊಳ್ಳುವುದು, ಸಿಹಿ ಹಂಚುವುದು ಸಹ ಸಾಮಾನ್ಯ ದೃಶ್ಯವಾಗಿತ್ತು. ಹೊಸ ಬಟ್ಟೆಗಳಲ್ಲಿ ಕಂಗೊಳಿಸುತ್ತಿದ್ದ ಎಲ್ಲರೂ ಬಿರು ಬಿಸಿಲಲ್ಲೂ ಉತ್ಸಾಹದ ಚಿಲುಮೆಗಳಂತೆ ಕಾಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.