ADVERTISEMENT

ಹೊಸಪೇಟೆ: ವೃತ್ತ, ಕ್ರೀಡಾಂಗಣಕ್ಕೆ ಪುನೀತ್‌ ರಾಜಕುಮಾರ್‌ ಹೆಸರಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 8:33 IST
Last Updated 12 ನವೆಂಬರ್ 2021, 8:33 IST
ಪುನೀತ್‌ ರಾಜಕುಮಾರ್‌ ಸರ್ಕಲ್‌ ಸಮಿತಿಯ ಕಾರ್ಯಕರ್ತರು ಸಚಿವ ಆನಂದ್‌ ಸಿಂಗ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪುನೀತ್‌ ರಾಜಕುಮಾರ್‌ ಸರ್ಕಲ್‌ ಸಮಿತಿಯ ಕಾರ್ಯಕರ್ತರು ಸಚಿವ ಆನಂದ್‌ ಸಿಂಗ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.    

ಹೊಸಪೇಟೆ (ವಿಜಯನಗರ): ನಗರದ ಪ್ರಮುಖ ವೃತ್ತ ಹಾಗೂ ಜಿಲ್ಲಾ ಕ್ರೀಡಾಂಗಣಕ್ಕೆ ನಟ ದಿವಂಗತ ಪುನೀತ್‌ ರಾಜಕುಮಾರ್‌ ಹೆಸರಿಡಬೇಕೆಂದು ‘ಪುನೀತ್‌ ರಾಜಕುಮಾರ್‌ ಸರ್ಕಲ್‌ ಸಮಿತಿ’ ಆಗ್ರಹಿಸಿದೆ.

ಸಮಿತಿಯ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಸಭೆ ನಡೆಸಿದರು. ನಂತರ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿ, ಹಕ್ಕೊತ್ತಾಯ ಮಾಡಿದರು.

ನಟನೆ, ಸಾಮಾಜಿಕ ಕಾಳಜಿ, ನಾಡಿನ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದ ಪುನೀತ್‌ ರಾಜಕುಮಾರ್‌ ಅವರ ಅಕಾಲಿಕ ಸಾವಿನಿಂದ ನಾಡಿಗೆ ದೊಡ್ಡ ನಷ್ಟವಾಗಿದೆ. ಗಣಿ ನಗರಿ ಹೊಸಪೇಟೆಯೊಂದಿಗೆ ವಿಶೇಷ ನಂಟು ಹೊಂದಿದ್ದರು. ಜಿಲ್ಲೆಯಲ್ಲಿ ಅವರ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ನಗರಸಭೆ ವ್ಯಾಪ್ತಿಯ ಪ್ರಮುಖ ವೃತ್ತ ಮತ್ತು ಜಿಲ್ಲಾ ಕ್ರೀಡಾಂಗಣಕ್ಕೆ ಪುನೀತ್‌ ಅವರ ಹೆಸರಿಟ್ಟು ಅವರಿಗೆ ಗೌರವ ಸಲ್ಲಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ರೈತರು, ಹಿರಿಯ ನಾಗರಿಕರಿಗೆ ವೃದ್ಧಾಶ್ರಮ, ಅನಾಥರಿಗೆ ಅನಾಥಾಶ್ರಮ ಸೇರಿದಂತೆ ಅನೇಕ ಸಮಾಜಮುಖಿ ಕೆಲಸಗಳನ್ನು ಪುನೀತ್‌ ಅವರು ಮಾಡಿದ್ದಾರೆ. ಈಗ ಸಮಾಜ ಅವರಿಗೆ ಋಣ ತೀರಿಸುವ ಸಂದರ್ಭ ಬಂದಿದೆ. ಜಿಲ್ಲಾಡಳಿತ ಸಾರ್ವಜನಿಕರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಸಮಿತಿಯ ಪ್ರಮುಖರಾದ ಗುಜ್ಜಲ್‌ ರಘು, ವಿಶ್ವನಾಥ, ಕೆ. ಮೂರ್ತಿ, ರಾಜಣ್ಣ, ಟಿ. ಶಂಕರ್‌, ಗಣೇಶ ಸೇರಿದಂತೆ ಹಲವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.