
ಕಂಪ್ಲಿ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಸಿರುಗುಪ್ಪ ತಾಲ್ಲೂಕಿನ ಕರೂರು ಗ್ರಾಮದಿಂದ ಜಲಾಶಯದವರೆಗೆ ಹಮ್ಮಿಕೊಂಡಿರುವ ಐದನೇ ದಿನದ ಪಾದಯಾತ್ರೆಯು ತಾಲ್ಲೂಕಿನ ಚಿಕ್ಕಜಾಯಗನೂರು, ಗೋನಾಳ, ದೇವಸಮುದ್ರದ ಮೂಲಕ ಶನಿವಾರ ಪಟ್ಟಣ ತಲುಪಿತು.
ಸಂಘದ ಅಧ್ಯಕ್ಷ ಆರ್. ಮಾಧವರೆಡ್ಡಿ ಮಾತನಾಡಿ, ‘ಎರಡನೇ ಬೆಳೆ ಬೆಳೆಯಲು ನೀರು ಬಿಡುವುದಿಲ್ಲ ಎನ್ನುವ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾಗಿದೆ’ ಎಂದು ಹೇಳಿದರು.
‘ಹವಾಮಾನ ವೈಪರೀತ್ಯದಿಂದ ಮುಂಗಾರಿನಲ್ಲಿ ಬೆಳೆದ ಭತ್ತ ಬೆಳೆಯಲ್ಲಿ ಹಲವು ರೋಗಗಳು ಕಾಣಿಸಿಕೊಂಡು, ಇಳುವರಿ ಕುಂಟಿತವಾಗಿದೆ. ಹಿಂಗಾರು ಹಂಗಾಮಿನ ಭತ್ತಕ್ಕೆ ನೀರು ಪೂರೈಸಿದಲ್ಲಿ ರೈತರು ನಷ್ಟ ಸರಿದೂಗಿಸಿಕೊಳ್ಳಲು ಅನುಕೂಲವಾಗುತ್ತದೆ’ ಎಂದು ತಿಳಿಸಿದರು.
‘ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತದೆ. ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಯ ಶಾಸಕರು, ರೈತರ ಸಮ್ಮುಖದಲ್ಲಿ ಮುನಿರಾಬಾದ್ನಲ್ಲಿ ಸಭೆ ನಡೆಸಲು ಹಿಂದೇಟು ಹಾಕುವುದಾದರು ಏಕೆ?’ ಎಂದು ಕೇಳಿದರು
ರೈತ ಮುಖಂಡರಾದ ಚಾಗನೂರು ಮಲ್ಲಿಕಾರ್ಜುನರೆಡ್ಡಿ, ಚಲ್ಲಾ ವೆಂಕಟನಾಯ್ಡು, ಜಿ. ರಾಮನಗೌಡ, ಪ್ರಭಾಕರ ರೆಡ್ಡಿ, ಸುರೇಂದ್ರ, ಜಿ. ಪಂಪನಗೌಡ, ಚಾನಾಳ್ ವಿರುಪಾಕ್ಷಿ, ಕರೂರು ಸಣ್ಣ ತಿಮ್ಮಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.