ಹರಪನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟದ ಕೊನೆಯ ಕೊಂಡಿ, ಸಾಹಿತಿ, ಶತಾಯುಷಿ ಎಚ್.ಎಂ.ವೀರಭದ್ರಯ್ಯ (100) ಶನಿವಾರ ನಿಧನರಾದರು.
ಮೃತರಿಗೆ ನಿವೃತ್ತ ನ್ಯಾಯಾಧೀಶ ಎಚ್.ಎಂ.ಭರತೇಶ್ ಸೇರಿದಂತೆ ನಾಲ್ವರು ಪುತ್ರರು, ಮೂವರು ಪುತ್ರಿಯರಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ವೀರಭದ್ರಯ್ಯನವರ ಪಾರ್ಥಿವ ಶರೀರ ಪಟ್ಟಣಕ್ಕೆ ತಂದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲು ನಿರ್ಧರಿಸಲಾಗಿದೆ. ಅನಂತರ ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಚೋರನೂರು ಗ್ರಾಮದ ಅವರ ತೋಟದಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
1923, ಜು.1ರಂದು ಚೋರನೂರು ಗ್ರಾಮದಲ್ಲಿ ಜನಿಸಿರುವ ಎಚ್.ಎಂ.ವೀರಭದ್ರಯ್ಯ ಅವರು, 1945ರಲ್ಲಿ ಮದ್ರಾಸ್ ಪ್ರಾಂತ್ಯದ ಹೈಕೋರ್ಟ್ನಲ್ಲಿ ವಕೀಲಿವೃತ್ತಿ ಆರಂಭಿಸಿದ್ದರು. ಮಹಾತ್ಮ ಗಾಂಧೀಜಿ ಅವರ ಹೋರಾಟಗಳಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು.‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ’ಯಲ್ಲಿ ಸಕ್ರಿಯರಾಗಿ, ಭೂಗತರಾಗಿ ಅಂಚೆ ಕಚೇರಿ ಧ್ವಂಸ, ಸ್ವಾತಂತ್ರ್ಯ ಹೋರಾಟಗಾರರ ಸಂಘಟನೆ ಚುರುಕುಗೊಳಿಸಿದ್ದರು.
ಜಿಲ್ಲೆಯಲ್ಲಿ ನಡೆದ ಹೋರಾಟ ಸ್ಮರಿಸಲು ‘ಹರಪನಹಳ್ಳಿ ತಾಲ್ಲೂಕು ಸ್ವಾತಂತ್ರ್ಯ ಹೋರಾಟಗಾರರು’, ‘ಕರ್ನಾಟಕ ಪೊಲೀಸ್ ಮ್ಯಾನುವಲ್’, ‘ಪಾಟೀ ಸವಾಲು’ ಶಿವಭಕ್ತ ರಾವಣ, ಆದರ್ಶವಾದಿ ಮತ್ತು ಸಮಾಜ ಸುಧಾರಕ, ಸೇರಿದಂತೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಕಾನೂನು ಪುಸ್ತಕಗಳನ್ನು ಕನ್ನಡದಲ್ಲೇ ಬರೆದಿರುವ ಹಿರಿಮೆ ಇವರದು.
1958ರಲ್ಲಿ ಸಂಡೂರು ವಿದಾನಸಭಾ ಕ್ಷೇತ್ರದಿಂದ ಪ್ರಜಾ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಎಂ.ವೈ.ಘೋರ್ಪಡೆ ವಿರುದ್ಧ ಸ್ಪರ್ಧಿಸಿ ಸೋತಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.