
ಹೊಸಪೇಟೆ (ವಿಜಯನಗರ): ವಿರೂಪಾಕ್ಷನ ಸನ್ನಿಧಿ ಹಂಪಿ ಹೋಳಿ ಆಚರಣೆಗೆ ಸಜ್ಜಾಗಿದ್ದು, ಬುಧವಾರ ಬೆಳಿಗ್ಗೆ ವಿದೇಶಿಯರ ಸಹಿತ ಸಾವಿರಾರು ಮಂದಿ ಬಣ್ಣದೋಕುಳಿಯಲ್ಲಿ ಮಿಂದೇಳಲಿದ್ದಾರೆ.
ಶಿವನು ತನ್ನ ಮೂರನೇ ಕಣ್ಣನ್ನು ತೆರೆದು ಕಾಮನನ್ನು ಸುಟ್ಟು ಭಸ್ಮ ಮಾಡಿದ ಪುಣ್ಯಕ್ಷೇತ್ರವೇ ಹಂಪಿಯ ವಿರೂಪಾಕ್ಷ ಸನ್ನಿಧಿ. ದೇವಸ್ಥಾನದ ಪಕ್ಕದ ಮನ್ಮಥ ಹೊಂಡದಲ್ಲಿ ಈ ಕಾಮದಹನ ನಡೆಯಿತು ಎಂಬ ಪ್ರತೀತಿ ಇದೆ. ಹೀಗಾಗಿ ವಿರೂಪಾಕ್ಷ ದೇವಸ್ಥಾನದ ಆವರಣದಲ್ಲಿನ ಹೋಳಿ ಆಚರಣೆಗೆ ವಿಶೇಷ ಮಹತ್ವ ಬಂದಿದೆ.
ಪ್ರತಿ ವರ್ಷ ನೂರಾರು ವಿದೇಶಿ ಪ್ರವಾಸಿಗರು ಈ ಬಣ್ಣದೋಕುಳಿಯಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ. ಕೆಲವು ವಿದೇಶಿಯರು ಹಂಪಿಯಲ್ಲಿ ಹೋಳಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಇದೇ ಸಮಯಕ್ಕೆ ತಮ್ಮ ಪ್ರವಾಸವನ್ನು ನಿಗದಿಪಡಿಸಿರುತ್ತಾರೆ. ಬಣ್ಣ ಎರಚಿ, ನೃತ್ಯ ಮಾಡಿ, ಕುಣಿದು ಕುಪ್ಪಳಿಸುವ ಮಂದಿ ಕೊನೆಗೆ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ಪುನೀತರಾಗುತ್ತಾರೆ. ಹಲವರು ಬಳಿಕ ದೇವರ ದರ್ಶನವನ್ನೂ ಮಾಡುತ್ತಾರೆ.
ಹೊಸಪೇಟೆಯಲ್ಲೂ ಹೋಳಿ ರಂಗು: ಶಾಸಕ ಎಚ್.ಆರ್.ಗವಿಯಪ್ಪ ಅವರು ಈ ಬಾರಿಯೂ ಇಲ್ಲಿನ ಪುನೀತ್ ರಾಜ್ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಭರ್ಜರಿ ಹೋಳಿ ಆಚರಣೆಗೆ ವ್ಯವಸ್ಥೆ ಮಾಡಿದ್ದಾರೆ. ಸಾವಿರಾರು ಮಂದಿ ಯುವಜನತೆ ಇದರಲ್ಲಿ ಪಾಲ್ಗೊಂಡು ಬಣ್ಣದೋಕುಳಿ ಎರಚಲಿದ್ದಾರೆ.
ಹೋಳಿ ಹಬ್ಬದ ಸಂಭ್ರಮ
ಹಗರಿಬೊಮ್ಮನಹಳ್ಳಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಹೋಳಿ ಹಬ್ಬದ ಅಂಗವಾಗಿ ಮಂಗಳವಾರ ಯುವಕ-ಯುವತಿಯರು ಚಿಣ್ಣರು ಮಹಿಳೆಯರು ರಂಗುರಂಗಿನ ಆಟವಾಡಿ ಬಣ್ಣದಲ್ಲಿ ಮಿಂದೆದ್ದರು. ಪರಸ್ಪರ ಬಣ್ಣ ಎರೆಚಿ ಸಂಭ್ರಮಿಸಿದರು. ಎಲ್ಲ ಕಡೆಗಳಲ್ಲಿಯೂ ಹಲಗೆಗಳ ಸದ್ದು ಪುರುಷರು ಮತ್ತು ಮಹಿಳೆಯರು ಬೇಧವಿದಲ್ಲದೆ ಎಲ್ಲ ವಯೋಮಾನದವರು ಬಣ್ಣದ ಓಕುಳಿಯಲ್ಲಿ ಮಿಂದೆದ್ದರು. ಪಟ್ಟಣದ ಕೂಡ್ಲಿಗಿ ವೃತ್ತದಲ್ಲಿ ಕಲರ್ಸ್ ವಿತ್ ಕಾರಂಜಿಯೊಂದಿಗೆ ಬಣ್ಣಬಣ್ಣದ ಓಕುಳಿಯೊಂದಿಗೆ ಯುವಕರು ಹಾಡುಗಳಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾ ಹುಚ್ಚೆದ್ದು ಕುಣಿದರು. ವಿವಿಧ ಪ್ರಕಾರಗಳ ಬಣ್ಣ ಪಿಚಕಾರಿ ಬಣ್ಣಬಣ್ಣದ ವಸ್ತುಗಳಿಂದ ಎಲ್ಲರ ಮೇಲೆ ಎರೆಚುವುದು ಸಾಮಾನ್ಯವಾಗಿತ್ತು. ಶಾಲೆಗಳಲ್ಲಿ ಬಾಲಕರು ಮತ್ತು ಬಾಲಕಿಯರು ಪರಸ್ಪರ ಬಣ್ಣ ಹಚ್ಚಿ ಶುಭಾಶಯ ಕೋರಿದರು. ರಾಮನಗರದ ತೇರು ಬೀದಿಯಲ್ಲಿ ರತಿಮನ್ಮಥರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು ಬೆಳಗಿನ ಜಾವ ಕಾಮದಹನ ನಡೆಯಿತು. ನೂರಾರು ಜನ ಪಾಲ್ಗೊಂಡಿದ್ದರು. ಯಾವುದೇ ಅವಘಡಗಳು ಜರುಗದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.